
ಉಡುಪಿ : ವಿವಾದಾತ್ಮಕ ಹಿಂದುತ್ವವಾದಿ ಚಿಂತನಕಾರ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಸೂಲಿಬೆಲೆ ಸುಳ್ಳಿನ ಚಕ್ರವರ್ತಿ. ಬಾಯಿ ತೆರೆದರೆ ರಾಮಾಯಣ-ಮಹಾಭಾರತ ಹೇಳುತ್ತಾರೆ, ಆದರೆ ಯಾವ ಪ್ರಮಾಣದಲ್ಲಿ ಸುಳ್ಳು ಹೇಳುತ್ತಾರೆ ಅನ್ನೋದು ಇಡೀ ಕರ್ನಾಟಕಕ್ಕೆ ಗೊತ್ತು. ” ಎಂದು ಅವರು ಲೇವಡಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, “ಕಪ್ಪನ್ನು ಬಿಳಿ ಎಂದು , ಬಿಳಿಯನ್ನು ಕಪ್ಪು ಎಂದು ಬಣ್ಣಿಸುವಲ್ಲಿ ಸೂಲಿಬೆಲೆ ನಿಸ್ಸೀಮರು. ಇಂತಹವರಿಂದ ನಾವು ಪಾಠ ಕೇಳಬೇಕಾದ ಅವಶ್ಯಕತೆ ಇಲ್ಲ. ವಾಕ್ ಸ್ವಾತಂತ್ರ್ಯ ಸೇರಿದಂತೆ ಎಲ್ಲಾ ಹಕ್ಕುಗಳನ್ನು ನೀಡಿದ ಪಕ್ಷ ಕಾಂಗ್ರೆಸ್ ಆಗಿದ್ದು, ಸಂವಿಧಾನವನ್ನು ಎತ್ತಿ ಹಿಡಿದದ್ದು ನಾವು” ಎಂದು ಹೇಳಿದರು.
ಉಡುಪಿಗೆ ಸೂಲಿಬೆಲೆ ಆಗಮನಕ್ಕೆ ಪ್ರತಿಕ್ರಿಯೆ:
“ಚಕ್ರವರ್ತಿ ಸೂಲಿಬೆಲೆ ಅವರು ಮೂರು ದಿನಗಳಿಂದ ಉಡುಪಿಯಲ್ಲಿದ್ದಾರೆ ಎಂಬ ಮಾಹಿತಿ ಪೊಲೀಸರಿಂದ ತಿಳಿದುಬಂದಿದೆ. ಅವರು ಪ್ರವಾಸ ಮಾಡಬಹುದಾದ ಹಕ್ಕು ಹೊಂದಿದ್ದಾರೆ. ಆದರೆ ಉಡುಪಿಯ ಶಾಂತಿ ಕದಡುವ ಕೆಲಸ ಮಾಡಬಾರದು. ದ್ವೇಷ ಭಾಷಣ, ಸುಳ್ಳು ಬಿತ್ತುವ ಪ್ರವೃತ್ತಿಗೆ ಅವಕಾಶ ನೀಡಬಾರದು” ಎಂದು ಎಚ್ಚರಿಸಿದರು.
ಕೋಮು ನಿಗ್ರಹ ಪಡೆ ವಿಚಾರ:
ಕರಾವಳಿ ಜಿಲ್ಲೆಗಳಲ್ಲಿ ಕೋಮು ನಿಗ್ರಹ ಪಡೆ ರಚನೆಗೆ ಬಿಜೆಪಿ ಶಾಸಕರ ವಿರೋಧದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ಒಂದೆಡೆ ಬಿಜೆಪಿ ಪ್ರಚೋದಕ ಭಾಷಣ ಮಾಡುತ್ತೆ, ಮತ್ತೊಂದೆಡೆ ಕೋಮು ನಿಗ್ರಹ ಪಡೆಯ ವಿರುದ್ಧ ಮಾತನಾಡುತ್ತಾರೆ. ಈ ರೀತಿಯ ದ್ವಂದ್ವ ಭಾವನೆಗಳು ಅವರ ನಿಜವಾದ ರಾಜಕೀಯ ಬಣ್ಣವನ್ನು ಬಯಲಿಗೆ ತರುತ್ತವೆ” ಎಂದು ಟೀಕಿಸಿದರು.