
ಕುಂದಾಪುರ: ತಾಲೂಕಿನ ಶೆಟ್ರಕಟ್ಟೆಯಲ್ಲಿ ಇತ್ತೀಚೆಗಷ್ಟೇ ಸಂಭವಿಸಿದ ಭೀಕರ ಟಿಪ್ಪರ್ ದುರಂತದ ಕರಾಳ ನೆನಪು ಮಾಸುವ ಮುನ್ನವೇ, ಬುಧವಾರ ಮತ್ತೊಂದು ಯಮರೂಪಿ ಟಿಪ್ಪರ್ ಬಾಣಸಿಗರೊಬ್ಬರ ಜೀವ ಬಲಿಪಡೆದಿದೆ.
ಪೆಟ್ರೋಲ್ ಹಾಕಿಸಲು ಹೋದಾಗ ಎದುರಾದ ಮೃತ್ಯು:
ಮೂಲತಃ ಆಲೂರಿನವರಾದ, ಪ್ರಸ್ತುತ ಕೋಟೇಶ್ವರದ ಅಂಕದಕಟ್ಟೆ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಕೃಷ್ಣ ಮೂರ್ತಿ ಅಡಿಗ (57) ಅವರು ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ವೃತ್ತಿಯಲ್ಲಿ ಬಾಣಸಿಗರಾಗಿದ್ದ ಇವರು, ಆಲೂರಿನಲ್ಲಿ ಅಡುಗೆ ಕೆಲಸವೊಂದರ ಸಿದ್ಧತೆಯಲ್ಲಿದ್ದರು. ಒಂದು ವಾರದ ಹಿಂದೆಯಷ್ಟೇ ಹೊಸ ದ್ವಿಚಕ್ರ ವಾಹನ ಖರೀದಿಸಿದ್ದ ಇವರು, ಅದಕ್ಕೆ ಪೆಟ್ರೋಲ್ ಹಾಕಿಸಲು ಮನೆಯಿಂದ ಹೊರಟಿದ್ದರು. ಅಂಕದಕಟ್ಟೆ ಬಳಿ ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುತ್ತಿದ್ದಾಗ ವೇಗವಾಗಿ ಬಂದ ಟಿಪ್ಪರ್ ಇವರ ದ್ವಿಚಕ್ರ ವಾಹನಕ್ಕೆ ಗುದ್ದಿದೆ.
ತಲೆಗೆ ಗಂಭೀರ ಗಾಯ:
ಡಿಕ್ಕಿಯ ರಭಸಕ್ಕೆ ಕೃಷ್ಣ ಮೂರ್ತಿ ಅವರು ರಸ್ತೆಗೆ ಎಸೆಯಲ್ಪಟ್ಟಿದ್ದು, ತಲೆಗೆ ತೀವ್ರ ಸ್ವರೂಪದ ಪೆಟ್ಚು ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳೀಯರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಹೆದ್ದಾರಿಯಲ್ಲಿ ಟಿಪ್ಪರ್ ಗಳ ಅತಿವೇಗದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಂದಾಪುರ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಟಿಪ್ಪರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.




































