
ಕುಂದಾಪುರ: ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಓವರ್ಟೇಕ್ ಸಾಹಸವೊಂದು ಅಮಾಯಕ ಯುವಕನ ಜೀವವನ್ನೇ ಬಲಿಪಡೆದಿದೆ. ಇಲ್ಲಿನ ಶೆಟ್ರಕಟ್ಟೆ ತಿರುವಿನಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ತ್ರಾಸಿ ಮೂಲದ ವಿಜಯ್ ಎಂದು ಗುರುತಿಸಲಾಗಿದೆ. ಇವರು ತ್ರಾಸಿಯಲ್ಲಿ ಫಾಸ್ಟ್ ಫುಡ್ ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಇಂದು ಬೆಳಿಗ್ಗೆ ವಿಜಯ್ ಅವರು ತಮ್ಮ ಬೈಕ್ನಲ್ಲಿ ತ್ರಾಸಿಯಿಂದ ಸೌಕೂರು ಮಾರ್ಗವಾಗಿ ಪ್ರಯಾಣಿಸುತ್ತಿದ್ದರು. ಈ ವೇಳೆ ಶೆಟ್ರಕಟ್ಟೆ ಸಮೀಪದ ಅಪಾಯಕಾರಿ ತಿರುವಿನಲ್ಲಿ ಮುಂದಿದ್ದ ಖಾಸಗಿ ಬಸ್ಸನ್ನು ದಾಟಿ ಮುಂದೆ ಹೋಗಲು ಯತ್ನಿಸಿದ್ದಾರೆ. ದುರದೃಷ್ಟವಶಾತ್, ಓವರ್ಟೇಕ್ ಮಾಡುವ ಸಂಧರ್ಭದಲ್ಲಿ ಎದುರಿನಿಂದ ವೇಗವಾಗಿ ಬಂದ ಮತ್ತೊಂದು ಖಾಸಗಿ ಬಸ್ಗೆ ವಿಜಯ್ ಅವರ ಬೈಕ್ ನೇರವಾಗಿ ಮುಖಾಮುಖಿ ಡಿಕ್ಕಿಯಾಗಿದೆ.
ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಬೈಕ್ ಸವಾರ ಬಸ್ಸಿನ ಮುಂಭಾಗಕ್ಕೆ ಅಪ್ಪಳಿಸಿ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ತಲೆಗೆ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರ ಸ್ವರೂಪದ ಗಾಯಗಳಾದ ಪರಿಣಾಮ, ಚಿಕಿತ್ಸೆಗೂ ಮುನ್ನವೇ ಅವರು ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಇದೇ ಶೆಟ್ರಕಟ್ಟೆ ಪ್ರದೇಶದಲ್ಲಿ ಟಿಪ್ಪರ್ ಹಾಗೂ ಸರ್ಕಾರಿ ಬಸ್ ನಡುವೆ ಭೀಕರ ಅಪಘಾತ ನಡೆದಿತ್ತು. ಆ ಘಟನೆಯ ಭೀತಿ ಹಸಿರಾಗಿರುವಾಗಲೇ, ಕೆಲವೇ ಮೀಟರ್ಗಳ ಅಂತರದಲ್ಲಿ ಮತ್ತೊಂದು ಸಾವು ಸಂಭವಿಸಿರುವುದು ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶ ಮೂಡಿಸಿದೆ. ಕುಂದಾಪುರ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.



































