
ಜಿಲ್ಲೆಯ ಕುಂದಾಪುರ ತಾಲೂಕಿನ ಬಿಜಾಡಿಯ ಯೋಧ ಅನೂಪ್ ಪೂಜಾರಿ ಕಾಶ್ಮೀರದಲ್ಲಿ ಮೃತಪಟ್ಟಿದ್ದು ಕುಟುಂಬ ಕಣ್ಣೀರ ಕೋಡಿಯನ್ನು ಹರಿಸುತ್ತಿದೆ. 20 ದಿನಗಳ ರಜೆ ಮುಗಿಸಿ ಶನಿವಾರವಷ್ಟೇ ಕಾಶ್ಮೀರಕ್ಕೆ ಅನೂಪ್ ವಾಪಾಸ್ಸಾಗಿದ್ದರು. ಯೋಧ ಅನೂಪ್ ಅವರಿಗೆ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಪುಟ್ಟ ಮಗು ಇದೆ. ಸುದ್ದಿ ತಿಳಿದು ಪತ್ನಿ ತವರಿನಿಂದ ಮನೆಗೆ ವಾಪಾಸ್ ಆಗುತ್ತಿದ್ದಾರೆ. ಅನೂಪ್ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದರು. ತಾಯಿ ಇಬ್ಬರು ಸಹೋದರಿಯರು ಮತ್ತವರ ಕುಟುಂಬ ಘಟನೆಯಿಂದ ಕಣ್ಣೀರಾಗಿದೆ. ಕಳೆದ 13 ವರ್ಷಗಳಿಂದ ಭಾರತೀಯ ಸೇನೆಯಲ್ಲಿರುವ ಅನುಪ್ ಪೂಜಾರಿ, ಪ್ರಸ್ತುತ ಹವಾಲ್ದಾರ್ ಆಗಿ ಮರಾಠ ಲೈಟ್ ಇನ್ಫೆಂಟ್ರಿ ಬೆಟಾಲಿಯನ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು ಹವಾಲ್ದಾರ್ ಅನೂಪ್ ಪೂಜಾರಿ ಮೃತದೇಹದ ಅಂತ್ಯ ಸಂಸ್ಕಾರ ನಾಳೆ ನಡೆಯಲಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೆರವಣಿಗೆ ಮಾಡಿ, ಬಿಜಾಡಿ ಪಡು ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಮನೆಯಲ್ಲಿ ಅಂತಿಮ ವಿಧಿ ವಿಧಾನ ನಡೆಯಲಿದೆ. ಬೀಜಾಡಿ ಬೀಚ್ ಸಮೀಪ ಸರ್ಕಾರಿ ಜಾಗದಲ್ಲಿ ಅಂತ್ಯಸಂಸ್ಕಾರದ ಪ್ರಕ್ರಿಯೆಗಳು ನಡೆಯಲಿವೆ. ಈ ಬಗ್ಗೆ ಕುಟುಂಬಸ್ಥರು ಗ್ರಾಮಸ್ಥರು ಪೊಲೀಸರು ಸಭೆಗಳನ್ನು ನಡೆಸಿ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ, ದುರಂತದಲ್ಲಿ ಒಟ್ಟು ಐವರು ಸಾವು, ಜಮ್ಮು ಮತ್ತು ಕಾಶ್ಮೀರದ ಪೊಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಡಿ.24ರಂದು ಸಂಜೆ ಸಂಭವಿಸಿದ ಸೇನಾ ವಾಹನ ಅಪಘಾತದಲ್ಲಿ ಕರ್ನಾಟಕದ 3 ಯೋಧರು ಸೇರಿ ಒಟ್ಟು 5 ಯೋಧರು ಮೃತಪಟ್ಟಿದ್ದಾರೆ. ಸೇನಾ ವಾಹನ ಆಳವಾದ ಕಂದಕಕ್ಕೆ ಉರುಳಿದ್ದು, ದುರಂತದಲ್ಲಿ ಐವರು ಸೈನಿಕರು ಸಾವನ್ನಪ್ಪಿದ್ದಾರೆ. 12 ಮಂದಿ ಗಾಯಗೊಂಡಿದ್ದಾರೆ.
ನಿಲಂ ಪ್ರಧಾನ ಕಛೇರಿಯಿಂದ ಎಲ್ಒಸಿ ಮೂಲಕ ಬನೋಯ್ ಘರೋವಾ ಪೋಸ್ಟ್ಗೆ ತೆರಳುತ್ತಿದ್ದಾಗ 11 ಮರಾಠಾ ಲೈಟ್ ಇನ್ಫೆಂಟ್ರಿಯ ಸೇನಾ ವಾಹನ ಸುಮಾರು ಆಳದ ಕಂದಕಕ್ಕೆ ಉರುಳಿತು. ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಗಾಯಗೊಂಡಿರುವ ಯೋಧರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ವರದಿಯಾಗಿದೆ. ದುರಂತದಲ್ಲಿ ಮೃತಪಟ್ಟ ಐವರು ಯೋಧರಲ್ಲಿ, ಮೂವರು ಕರ್ನಾಟಕದವರಾಗಿದ್ದಾರೆ. ಸುಬೇದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬೆಳಗಾವಿಯ ದಯಾನಂದ ತಿರಕಣ್ಣವರ, ಉಡುಪಿ ಮೂಲದ ಹವಾಲ್ದಾರ್ ಅನೂಪ್ ಪೂಜಾರಿ, ಬಾಗಲಕೋಟೆಯ ಯೋಧ ಮಹೇಶ್ ನಾಗಪ್ಪ ಮರಿಗೊಂಡ ಹುತಾತ್ಮರಾಗಿದ್ದಾರೆ.
“ಜಮ್ಮು ಕಾಶ್ಮೀರದ ಪೂಂಛ್ ಬಳಿ ಸೇನಾ ವಾಹನ ಅಪಘಾತಕ್ಕೀಡಾಗಿ ಕರ್ನಾಟಕ ಮೂಲದ ಯೋಧರಾದ ದಯಾನಂದ ತಿರಕಣ್ಣನವರ, ಅನೂಪ್ ಪೂಜಾರಿ ಹಾಗೂ ಮಹೇಶ್ ಮರಿಗೊಂಡ ಅವರು ಹುತಾತ್ಮರಾದ ಸುದ್ದಿ ತಿಳಿದು ನೋವಾಯಿತು. ಮೃತ ಯೋಧರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ದೇಶ ಸೇವೆಗಾಗಿ ಜೀವ ಮುಡಿಪಿಟ್ಟ ಈ ಹುತಾತ್ಮ ಯೋಧರ ತ್ಯಾಗ, ಬಲಿದಾನವನ್ನು ನಾಡು ಸದಾಕಾಲ ಸ್ಮರಿಸಲಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.




































