
ಬ್ರಹ್ಮಾವರ ತಾಲೂಕಿನ ಸೈಬ್ರಕಟ್ಟೆ ನಿವಾಸಿ, 17 ವರ್ಷದ ವಂಶಿತ್ ಎಂಬ ವಿದ್ಯಾರ್ಥಿಯೇ ದುರಂತ ಅಂತ್ಯ ಕಂಡ ಕಿಶೋರ. ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಈತ, ಜನವರಿ 4 ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಸ್ಕೂಟರ್ ಚಲಾಯಿಸಿಕೊಂಡು ಹೊರಗೆ ಹೋಗಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಸ್ಕೂಟರ್ ಸ್ಕಿಡ್ ಆಗಿ ಬಿದ್ದಿದ್ದು, ವಾಹನದ ಕಿಕ್ಕರ್ ತುಂಡಾಗಿತ್ತು. ಭಾನುವಾರವಾಗಿದ್ದರಿಂದ ಗ್ಯಾರೇಜ್ಗಳು ಮುಚ್ಚಿದ್ದವು, ಹೀಗಾಗಿ ಗಾಡಿ ರಿಪೇರಿ ಮಾಡಿಸಲು ಸಾಧ್ಯವಾಗದೆ ಆತ ಮನೆಗೆ ಮರಳಿದ್ದ.
ಮನೆಯಲ್ಲಿ ತಂದೆ-ತಾಯಿ ಇಲ್ಲದ ವೇಳೆ ನಡೆದ ಈ ಸಣ್ಣ ಅನಾಹುತಕ್ಕೆ ಪೋಷಕರು ಬೈಯಬಹುದೆಂಬ ಅತಿಯಾದ ಭಯ ವಂಶಿತ್ನನ್ನು ಕಾಡಿದೆ. ಇದೇ ಆತಂಕದಲ್ಲಿ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮನೆಯಿಂದ ಹೊರಬಂದ ಆತ ನಾಪತ್ತೆಯಾಗಿದ್ದ. ಸಂಜೆ ಪೋಷಕರು ಮನೆಗೆ ಬಂದಾಗ ಮಗ ಕಾಣದೆ ಆತಂಕಗೊಂಡು ಹುಡುಕಾಟ ನಡೆಸಿದ್ದಾರೆ. ಹುಡುಕಾಟದ ವೇಳೆ ಸಮೀಪದಲ್ಲಿ ನಿರ್ಮಾಣವಾಗುತ್ತಿದ್ದ ರೆಸಾರ್ಟ್ ಒಂದರ ಗುಂಡಿಯ ಬಳಿ ವಂಶಿತ್ನ ಶರ್ಟ್ ಮತ್ತು ಚಪ್ಪಲಿ ಪತ್ತೆಯಾಗಿದೆ. ನೀರಿನಿಂದ ಕೂಡಿದ್ದ ಆ ಗುಂಡಿಯಲ್ಲಿ ಪರಿಶೀಲಿಸಿದಾಗ ವಿದ್ಯಾರ್ಥಿಯ ಶವ ಪತ್ತೆಯಾಗಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ವಂಶಿತ್ನ ತಂದೆ ಮಂದಾರ್ತಿ ಮೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆ. ಸದ್ಯ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಂದಾಪುರ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.



































