
ಕಾಸರಗೋಡು : ಅಹ್ಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟ ಕೇರಳದ ನರ್ಸ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ನಿಂದನೆ ಹಾಗೂ ಜಾತಿ ಆಧಾರಿತ ಟೀಕೆಗಳನ್ನು ಮಾಡಿದ್ದ ಹಿನ್ನೆಲೆಯಲ್ಲಿ ಕಾಸರಗೋಡು ಡೆಪ್ಯುಟಿ ತಹಶೀಲ್ದಾರ್ ಪವಿತ್ರನ್ ಅವರನ್ನು ಅಮಾನತು ಮಾಡಲಾಗಿದೆ.
ಮೃತ ಮಹಿಳೆ ಪತ್ತನಂತಿಟ್ಟ ಜಿಲ್ಲೆಯ ರಂಜಿತಾ ನಾಯರ್, ಲಂಡನ್ನ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಅಹ್ಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಬೋಯಿಂಗ್ ವಿಮಾನ ಪತನಗೊಂಡಿದ್ದು, ಈ ದುರಂತದಲ್ಲಿ ರಂಜಿತಾ ಸಾವಿಗೀಡಾಗಿದ್ದರು. ಈ ಕುರಿತು ಪವಿತ್ರನ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅಣಕಾತ್ಮಕ ಹಾಗೂ ಅವಹೇಳನಕಾರಿ ಪೋಸ್ಟ್ ಹಾಕಿ, ಮಹಿಳೆಯ ಜಾತಿಯನ್ನು ನಿಂದಿಸಿರುವುದು ಗೊತ್ತಾಗುತ್ತಿದ್ದಂತೆಯೇ, ಈ ಪೋಸ್ಟ್ಗಳು ವೈರಲ್ ಆಗಿ ಭಾರೀ ಆಕ್ರೋಶವನ್ನು ಹುಟ್ಟುಹಾಕಿದವು.
ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ, ವೆಳ್ಳರಿಕುಂಡು ತಾಲೂಕು ಡೆಪ್ಯುಟಿ ತಹಶೀಲ್ದಾರ್ ಆಗಿದ್ದ ಪವಿತ್ರನ್ ಅವರನ್ನು ಪೊಲೀಸರು ವಶಕ್ಕೆ ಪಡೆದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಇದೇ ವೇಳೆ ಕಂದಾಯ ಸಚಿವ ಕೆ. ರಾಜನ್ ಅವರ ಆದೇಶದ ಮೇರೆಗೆ, ಪವಿತ್ರನ್ ಅವರನ್ನು ಅಧಿಕಾರದಿಂದ ಅಮಾನತು ಮಾಡಲಾಗಿದೆ.ಈ ಪ್ರಕರಣವು ಗಂಭೀರವಾಗಿದೆ ಎಂಬ ಕಾರಣದಿಂದ ತಕ್ಷಣದ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ, ಇದೇ ಪವಿತ್ರನ್ ಅವರು ಈ ಹಿಂದೆ ಶಾಸಕ ಇ. ಚಂದ್ರಶೇಖರನ್ ಅವರ ವಿರುದ್ಧವೂ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲೂ ಅಮಾನತಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.