
ಚಾರಣಿಗರೇ ಗಮನಿಸಿ : ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶಗಳಲ್ಲಿ ಕಾಡ್ಗಿಚ್ಚಿನ ಅಪಾಯವನ್ನು ತಡೆಗಟ್ಟುವ ಉದ್ದೇಶದಿಂದ ಅರಣ್ಯ ಇಲಾಖೆಯು ಚಾರಣಿಗರಿಗೆ ಬಿಗ್ ಶಾಕ್ ನೀಡಿದೆ. ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಗೆ ಬರುವ ಪ್ರಮುಖ ಚಾರಣ ಪಥಗಳಿಗೆ ಇಂದಿನಿಂದ (ಜನವರಿ 14) ಅನ್ವಯವಾಗುವಂತೆ ತಾತ್ಕಾಲಿಕ ನಿಷೇಧ ಹೇರಿ ಆದೇಶ ಹೊರಡಿಸಲಾಗಿದೆ.
ಬೇಸಿಗೆಯ ಆರಂಭದೊಂದಿಗೆ ಕಾಡಿನಲ್ಲಿ ಒಣಗಿದ ಎಲೆಗಳು ಮತ್ತು ಹುಲ್ಲು ಬೆಂಕಿಗೆ ಆಹುತಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ (Fire Season). ಈ ಸಮಯದಲ್ಲಿ ಪ್ರವಾಸಿಗರು ಮತ್ತು ಚಾರಣಿಗರ ಸುರಕ್ಷತೆ ಹಾಗೂ ವನ್ಯಜೀವಿಗಳ ಸಂರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ಮತ್ತು ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯಗಳ ವ್ಯಾಪ್ತಿಯಲ್ಲಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಕಾರ್ಕಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಮುಂದಿನ ಆದೇಶದವರೆಗೆ ಈ ನಿರ್ಬಂಧ ಜಾರಿಯಲ್ಲಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ನಿಗದಿಪಡಿಸಲಾದ ಚಾರಣ ಪಥಗಳ ಪ್ರವೇಶ ದ್ವಾರಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲು ಮತ್ತು ಅನಧಿಕೃತ ಪ್ರವೇಶ ತಡೆಯಲು ಹೆಚ್ಚಿನ ಕಾವಲುಗಾರರನ್ನು ನಿಯೋಜಿಸಲು ಇಲಾಖೆ ಸೂಚಿಸಿದೆ. ಪ್ರಕೃತಿ ಪ್ರೇಮಿಗಳು ಮತ್ತು ಪ್ರವಾಸಿಗರು ಇಲಾಖೆಯ ಈ ನಿರ್ಧಾರಕ್ಕೆ ಸಹಕರಿಸಬೇಕೆಂದು ಕೋರಲಾಗಿದೆ.
ಚಾರಣಕ್ಕೆ ನಿರ್ಬಂಧವಿರುವ ಪ್ರಮುಖ ಪ್ರದೇಶಗಳು :
-ಗಂಗಡಿಕಲ್ ಚಾರಣ,
-ಕುದುರೆಮುಖ ಚಾರಣ
-ಕುರಿಂಜಾಲು ಚಾರಣ
-ವಾಲಿಕುಂಜ ಚಾರಣ – ಎಸ್. ಕೆ. ಬಾರ್ಡರ್
-ವಾಲಿಕುಂಜ ಚಾರಣ-ಕರ್ವಾಶೆ
-ನರಸಿಂಹ ಪರ್ವತ-ಕಿಗ್ಗ
-ನರಸಿಂಹ ಪರ್ವತ-ಮಳಂದೂರು
-ಕೊಡಚಾದ್ರಿ – ವಳೂರು
-ಕೊಡಚಾದ್ರಿ-ಹಿಡ್ಲುಮನೆ
-ಬಂಡಾಜಿ-ವೊಳಂಬ್ರ
-ನೇತ್ರಾವತಿ ಚಾರಣ




































