
ಕಲಬುರಗಿ: ಜಿಲ್ಲೆಯ ಸೇಡಂ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಪಥಸಂಚಲನಕ್ಕೆ ಕೊನೆಯ ಕ್ಷಣದಲ್ಲಿ ಅನುಮತಿ ನಿರಾಕರಿಸಿದ ಕಾರಣ, ಗಣವೇಷಧಾರಿಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ರವಿವಾರ ಸಂಜೆ ಜರುಗಿದೆ.
ನಿಗದಿಯಂತೆ ರವಿವಾರ ಸಂಜೆ 4 ಗಂಟೆಗೆ ಆರ್ಎಸ್ಎಸ್ನವರು ಪಥಸಂಚಲನ ನಡೆಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಪುರಸಭೆಯು ಮಧ್ಯಾಹ್ನ 3:10ಕ್ಕೆ ಏಕಾಏಕಿ ಅನುಮತಿ ನಿರಾಕರಿಸಿ ಆದೇಶ ಹೊರಡಿಸಿದೆ.
ಈ ಹಠಾತ್ ಬೆಳವಣಿಗೆಯಿಂದ ಆಕ್ರೋಶಗೊಂಡ ಆರ್ಎಸ್ಎಸ್ ಕಾರ್ಯಕರ್ತರು, ಕೊನೆಯ ಘಳಿಗೆಯಲ್ಲಿ ಅನುಮತಿ ರದ್ದುಗೊಳಿಸಿದ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ನಿರ್ಧಾರವನ್ನು ಧಿಕ್ಕರಿಸಿ ಗಣವೇಷಧಾರಿಗಳು ಪಥಸಂಚಲನಕ್ಕೆ ಮುಂದಾದಾಗ ಸ್ಥಳದಲ್ಲಿದ್ದ ಪೊಲೀಸರು ಅವರನ್ನು ತಡೆದು ವಶಕ್ಕೆ ತೆಗೆದುಕೊಂಡರು.
ಜಿಲ್ಲಾಡಳಿತದ ಈ ನಡೆಗೆ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ರಾಜಕುಮಾರ ಪಾಟೀಲ್ ಅವರು, “ಕೈಯಲ್ಲಿ ತಲವಾರ ಹಿಡಿದು ಮೆರವಣಿಗೆ ಮಾಡುವವರಿಗೆ ಯಾವುದೇ ನಿರ್ಬಂಧ ವಿಧಿಸದ ಸರ್ಕಾರ, ದೇಶಭಕ್ತಿಯನ್ನು ಹೆಚ್ಚಿಸುವ ಆರ್ಎಸ್ಎಸ್ ಪಥಸಂಚಲನವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ?” ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದರು.
ಬಲವಂತವಾಗಿ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು, ಅವರನ್ನು ವ್ಯಾನ್ನಲ್ಲಿ ಕರೆದುಕೊಂಡು ಹೋಗಿ ಠಾಣೆಗೆ ಸೇರಿಸಿದರು. ಈ ಘಟನೆಯಿಂದ ಸೇಡಂ ಪಟ್ಟಣದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.




































