
ಕೊಟ್ಟಿಗೆಹಾರ: ಕಾಫಿನಾಡು ಮತ್ತು ಕರಾವಳಿ ಪ್ರದೇಶಗಳ ನಡುವಿನ ಪ್ರಮುಖ ಸಂಪರ್ಕ ಮಾರ್ಗವಾದ ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ಸಂಚಾರಕ್ಕೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಅವರ ನಿರ್ದೇಶನದ ಮೇರೆಗೆ, ರಾತ್ರಿ ವೇಳೆ ಚಾರ್ಮಾಡಿ ಘಾಟ್ ಪ್ರವೇಶಿಸುವ ವಾಹನಗಳು ಒಂದೊಂದಾಗಿ ಪ್ರಯಾಣಿಸುವಂತಿಲ್ಲ. ಬದಲಾಗಿ, ಕನಿಷ್ಠ ಐದು ವಾಹನಗಳು ಒಟ್ಟಾಗಿ ಸೇರಿಕೊಂಡ ನಂತರವಷ್ಟೇ ಮುಂದೆ ಸಾಗಲು ಅನುಮತಿ ನೀಡಲಾಗುತ್ತದೆ.
ಈ ನಿಯಮದ ಅನ್ವಯ, ಕೊಟ್ಟಿಗೆಹಾರದ ಚೆಕ್ ಪೋಸ್ಟ್ನಲ್ಲಿ ರಾತ್ರಿ ವೇಳೆ ಪ್ರಯಾಣಿಸುವ ವಾಹನಗಳ ತಪಾಸಣೆ ನಡೆಸಿ, ಕನಿಷ್ಠ ಐದು ವಾಹನಗಳು ಒಟ್ಟಾಗಿ ನಿಂತ ನಂತರ ಅವುಗಳಿಗೆ ಏಕಕಾಲದಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುತ್ತದೆ. ಈ ಹೊಸ ವ್ಯವಸ್ಥೆಗೆ ಪ್ರಮುಖ ಕಾರಣ, ದಟ್ಟ ಅರಣ್ಯದಿಂದ ಕೂಡಿರುವ ಈ ಮಾರ್ಗದಲ್ಲಿ ರಾತ್ರಿ ಸಮಯದಲ್ಲಿ ಗೋ ಕಳ್ಳತನ ಮತ್ತು ಇತರ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ ಎಂಬ ದೂರುಗಳು ಬಂದಿದ್ದವು. ಈ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಹೊಸ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೆಕ್ ಪೋಸ್ಟ್ನಲ್ಲಿ ಈಗಿರುವ ತಡೆಗೋಡೆಗಳನ್ನು ಬದಲಾಯಿಸಿ, ಹೊಸ ಬೂಮ್ ಬ್ಯಾರಿಯರ್ ಅನ್ನು ನಿರ್ಮಿಸಲಾಗುತ್ತಿದೆ. ಅಲ್ಲದೆ, ರಾತ್ರಿ ವೇಳೆ ಒಬ್ಬ ಪಿಎಸ್ಐ ನೇತೃತ್ವದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. ಚೆಕ್ ಪೋಸ್ಟ್ನಿಂದ ಸುಮಾರು 1.5 ಕಿ.ಮೀ ದೂರದಲ್ಲಿರುವ ಒಂದು ಕಚ್ಚಾ ರಸ್ತೆಯನ್ನು ಗೋ ಕಳ್ಳರು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಕಾರಣದಿಂದಾಗಿ, ಸ್ಥಳೀಯರೊಂದಿಗೆ ಚರ್ಚಿಸಿ ಆ ರಸ್ತೆಯಲ್ಲಿ ಗೇಟ್ ನಿರ್ಮಿಸಿ, ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಅದನ್ನು ಮುಚ್ಚಲು ನಿರ್ಧರಿಸಲಾಗಿದೆ.
ಇದಲ್ಲದೆ, ಕೊಟ್ಟಿಗೆಹಾರ ಚೆಕ್ ಪೋಸ್ಟ್ ಮೂಲಕ ಹಾದುಹೋಗುವ ಎಲ್ಲಾ ವಾಹನಗಳ ವಿವರಗಳನ್ನು ಸಿಸಿಟಿವಿ ಮತ್ತು ಪೊಲೀಸ್ ದಾಖಲೆಗಳಲ್ಲಿ ಕಡ್ಡಾಯವಾಗಿ ನಮೂದಿಸಲು ಸೂಚಿಸಲಾಗಿದೆ. ಈ ‘ಮಾಸ್ಟರ್ ಪ್ಲಾನ್’ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಸಹಕಾರಿಯಾಗಲಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.