
ಕಾರ್ಕಳ: ಕಾರ್ಕಳ ನಗರದ ಬಸ್ ನಿಲ್ದಾಣದ ಬಳಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನವೊಂದನ್ನು ಕಳ್ಳತನಗೈದಿರುವ ಘಟನೆ ಜೂನ್ 13 ರಂದು ನಡೆದಿದೆ. ಸ್ಕೂಟರ್ ನಿಲ್ಲಿಸಿದ ಕೇವಲ ಅರ್ಧ ಗಂಟೆಯಲ್ಲೇ ಕಳ್ಳರು ವಾಹನವನ್ನು ಕಳವು ಮಾಡಿ ಪರಾರಿಯಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
ಘಟನೆಯ ವಿವರಗಳ ಪ್ರಕಾರ, ಕಾರ್ಕಳದ ನಿವಾಸಿ ಗಣೇಶ್ ಎಂಬವರು ತಮ್ಮ KA20EK8722 ನಂಬರ್ನ ಸ್ಕೂಟರ್ ಅನ್ನು ಕಾರ್ಕಳ ಬಸ್ ನಿಲ್ದಾಣದ ಬಳಿ ನಿಲ್ಲಿಸಿ ಸಮೀಪದ ಅಂಗಡಿಗೆ ತೆರಳಿದ್ದರು. ಅವರು ಅಂಗಡಿಗೆ ತೆರಳಿ ಹಿಂದಿರುಗುವಾಗ, ಸುಮಾರು ಅರ್ಧ ಗಂಟೆಯೊಳಗೆ ಸ್ಕೂಟರ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.
ವಾಹನದ ಕಳವು ಅನುಮಾನಾಸ್ಪದ ರೀತಿಯಲ್ಲಿ ನಡೆದಿದ್ದು, ಗಣೇಶ್ ಅವರು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಬಗ್ಗೆ ತನಿಖೆ ಪ್ರಾರಂಭವಾಗಿದೆ.