
ಕಾರ್ಕಳ: ನಡುರಾತ್ರಿಯಲ್ಲಿ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟದ ತೀವ್ರತೆಗೆ ಮನೆಯ ಗೋಡೆ ಕುಸಿದುಬಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಭೀಕರ ಘಟನೆ ಸಾಣೂರು ಗ್ರಾಮದ ಮುದ್ದಣ್ಣ ನಗರದಲ್ಲಿ ನಡೆದಿದೆ.
ಸಾಣೂರಿನ ಮುದ್ದಣ್ಣ ನಗರದ ನಿವಾಸಿ ವಾರಿಜಾ ಎಂಬುವವರ ಮನೆಯಲ್ಲಿ ಶುಕ್ರವಾರ ತಡರಾತ್ರಿ ಸುಮಾರು 1:30 ರ ವೇಳೆಗೆ ಈ ಭೀಕರ ಅನಾಹುತ ಸಂಭವಿಸಿದೆ. ಮನೆಯ ಅಡುಗೆ ಕೋಣೆಯ ಹೊರಭಾಗದಲ್ಲಿರಿಸಿದ್ದ ಸಿಲಿಂಡರ್ ಹಠಾತ್ತಾಗಿ ಸ್ಫೋಟಗೊಂಡಿದೆ. ಸ್ಫೋಟದ ಭೀಕರತೆ ಎಷ್ಟಿತ್ತೆಂದರೆ ಮನೆಯ ಗೋಡೆಯೇ ಧರೆಗುರುಳಿದೆ. ಮನೆಯೊಳಗಿದ್ದ ವಾಷಿಂಗ್ ಮೆಷಿನ್, ಪೀಠೋಪಕರಣಗಳು, ಬೆಲೆಬಾಳುವ ವಿದ್ಯುತ್ ಉಪಕರಣಗಳು ಹಾಗೂ ಅಡುಗೆ ಪಾತ್ರೆಗಳು ಸಂಪೂರ್ಣವಾಗಿ ಜಖಂಗೊಂಡಿವೆ.
ಅದೃಷ್ಟವಶಾತ್, ಮನೆಯ ಹೊರಪಾರ್ಶ್ವದಲ್ಲಿ ಸ್ಫೋಟ ಸಂಭವಿಸಿದ ಕಾರಣ ಮನೆಯಲ್ಲಿದ್ದವರಿಗೆ ಯಾವುದೇ ಜೀವಹಾನಿ ಅಥವಾ ಗಾಯಗಳಾಗಿಲ್ಲ. ಮಲಗಿದ್ದ ಸಮಯದಲ್ಲಿ ಈ ಘಟನೆ ನಡೆದಿದ್ದು, ಭಾರೀ ಶಬ್ದಕ್ಕೆ ಇಡೀ ಪರಿಸರದ ಜನತೆ ಬೆಚ್ಚಿಬಿದ್ದಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ. ಈ ಆಕಸ್ಮಿಕ ಅವಘಡದಿಂದಾಗಿ ಕುಟುಂಬಕ್ಕೆ ಸುಮಾರು 3 ಲಕ್ಷ ರೂಪಾಯಿಗಳಿಗೂ ಅಧಿಕ ಆರ್ಥಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.



































