
ಕಾರ್ಕಳ: ಉಡುಪಿ ಮೂಲದ ಗೀತಾಂಜಲಿ ಸಮೂಹ ಉದ್ಯಮ ಸಂಸ್ಥೆಗಳ ಪಾಲುದಾರರಾದ ವಾಗ್ಳೆ ಸಹೋದರರು, ರಾಮಕೃಷ್ಣ ವಾಗ್ಳೆ, ಲಕ್ಷ್ಮಣ ವಾಗ್ಳೆ, ರಮೇಶ್ ವಾಗ್ಳೆ, ಹರೀಶ್ ವಾಗ್ಳೆ ಮತ್ತು ಸಂತೋಷ್ ವಾಗ್ಳೆ ಅವರು ತಮ್ಮ ದಿವಂಗತ ತಂದೆ-ತಾಯಿ ಶ್ರೀ ಗೋವಿಂದ ವಾಗ್ಳೆ ಹಾಗೂ ಶ್ರೀಮತಿ ಜಲಜ ಅವರ ಸ್ಮರಣಾರ್ಥ, ಕಾರ್ಕಳದ ಬೈಲೂರು ಕೆಳಪೇಟೆಯಲ್ಲಿ ನಿರ್ಮಿಸಿರುವ ಸುಸಜ್ಜಿತ ಪ್ರಯಾಣಿಕರ ತಂಗುದಾಣವನ್ನು ಶಾಸಕ ವಿ. ಸುನೀಲ್ ಕುಮಾರ್ ಅವರು ಸಾರ್ವಜನಿಕ ಸೇವೆಗೆ ಸಮರ್ಪಿಸಿದರು.
ಬೈಲೂರು ಶ್ರೀರಾಮ ಮಂದಿರದಲ್ಲಿ ಆಯೋಜಿಸಲಾಗಿದ್ದ ಲೋಕಾರ್ಪಣಾ ಸಮಾರಂಭದಲ್ಲಿ ಮಾತನಾಡಿದ ಕಾರ್ಕಳ ಶಾಸಕ ಸುನೀಲ್ ಕುಮಾರ್, ವಾಗ್ಳೆ ಕುಟುಂಬದ ಸಾಮಾಜಿಕ ಬದ್ಧತೆ ಹಾಗೂ ಸಮಾಜಸೇವೆ ನಿಜಕ್ಕೂ ಪ್ರಶಂಸನೀಯ. ಸಾಮಾನ್ಯವಾಗಿ ಉದ್ಯಮಿಗಳು ತಮ್ಮ ವ್ಯವಹಾರದ ಮೇಲೆ ಮಾತ್ರ ಗಮನ ಹರಿಸುತ್ತಾರೆ. ಆದರೆ ವಾಗ್ಳೆ ಸಹೋದರರು ತಮ್ಮ ತಂದೆ-ತಾಯಿಯ ಸ್ಮರಣಾರ್ಥವಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ಇಂತಹ ಸುಂದರ ಸೌಲಭ್ಯವನ್ನು ನಿರ್ಮಿಸಿ, ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರ ಈ ಸೇವೆ ಕಾರ್ಕಳದ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡಿದೆ. ಈ ಕುಟುಂಬವು ತಮ್ಮ ವ್ಯವಹಾರದಲ್ಲಿ ಮತ್ತಷ್ಟು ಯಶಸ್ಸು ಕಾಣಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ವಾಗ್ಳೆ ಕುಟುಂಬ ಉಡುಪಿಯ ಹೋಟೆಲ್ ಉದ್ಯಮದಲ್ಲಿ ಯಶಸ್ಸು ಗಳಿಸಿದ್ದು, ಉತ್ತಮ ಗುಣಮಟ್ಟದ ಆಹಾರ ಮತ್ತು ಸೇವೆ ನೀಡಿ ಗ್ರಾಹಕರ ವಿಶ್ವಾಸ ಗಳಿಸಿದ್ದಾರೆ. ತಮ್ಮ ಯಶಸ್ಸಿನ ಜೊತೆಗೆ ಸಮಾಜಕ್ಕೆ ತಮ್ಮ ಕೈಲಾದ ಸಹಾಯ ಮಾಡುವುದು ಈ ಕುಟುಂಬದ ವಿಶೇಷ ಗುಣ. ಹಲವು ಕುಟುಂಬಗಳಿಗೆ ಉದ್ಯೋಗ ಒದಗಿಸಿ ಅನ್ನದಾತರಾಗಿಯೂ ವಾಗ್ಳೆ ಸಹೋದರರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಮಾಜಕ್ಕೆ ತನ್ನ ಋಣ ತೀರಿಸುವ ಮನೋಭಾವ ಎಲ್ಲರಿಗೂ ಇರುವುದಿಲ್ಲ. ಆದರೆ ವಾಗ್ಳೆ ಸಹೋದರರು ತಮ್ಮ ಗಳಿಕೆಯನ್ನು ಸಮಾಜದ ಒಳಿತಿಗಾಗಿ ಬಳಸುವ ಮೂಲಕ ನಿಜವಾದ ಸಂತೋಷವನ್ನು ಕಂಡುಕೊಂಡಿದ್ದಾರೆ. ಇದು ಸಮಾಜದ ಪ್ರಗತಿಗೆ ಉತ್ತಮ ಕೊಡುಗೆ ಎಂದರು. ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯ ಸುಮಿತ್ ಶೆಟ್ಟಿ ಮಾತನಾಡಿ, ಕಣ್ಣಿಗೆ ಕಾಣುವ ದೇವರುಗಳಾದ ತಂದೆ-ತಾಯಿಯನ್ನು ನೆನಪು ಮಾಡಿಕೊಳ್ಳುವವರ ಸಂಖ್ಯೆ ವಿರಳ. ಅಂತಹ ಸನ್ನಿವೇಶದಲ್ಲಿ ವಾಗ್ಳೆ ಸಹೋದರರು ತಮ್ಮ ತಂದೆ-ತಾಯಿಯ ನೆನಪಿನಲ್ಲಿ ಸಾರ್ವಜನಿಕ ಸೇವೆಗೆ ಮುಂದಾಗಿದ್ದು, ಇದು ಒಂದು ಆದರ್ಶ ಕಾರ್ಯ. ಈ ರಾಷ್ಟ್ರೀಯ ವಿಚಾರಧಾರೆಯುಳ್ಳ ಕೂಡು ಕುಟುಂಬ ಸಮಾಜಕ್ಕೆ ಒಂದು ಮಾದರಿ ಎಂದು ಬಣ್ಣಿಸಿದರು.
ಸಭೆಯ ಅಧ್ಯಕ್ಷತೆಯನ್ನು ನೀರೆ ಗ್ರಾಮ ಪಂಚಾಯತ್ ಅಧ್ಯಕ್ಷ ಸಚ್ಚಿದಾನಂದ ಎಸ್. ಪ್ರಭು ವಹಿಸಿದ್ದರು. ವೇದಿಕೆಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಗೋಕುಲ್ದಾಸ್ ನಾಯಕ್, ಬೈಲೂರು ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಭಟ್, ನೀರೆ ಗ್ರಾ.ಪಂ. ಸದಸ್ಯ ಹೈದರಾಲಿ, ಪಳ್ಳಿ ಅಡಪಾಡಿ ಶ್ರೀ ಉಮಾಮಹೇಶ್ವರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಧರ್ಮದರ್ಶಿ ಪುಂಡಲೀಕ ನಾಯಕ್, ನೀರೆ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಉಡುಪಿ ಉಜ್ವಲ್ ಡೆವಲಪರ್ಸ್ನ ಪುರುಷೋತ್ತಮ ಶೆಟ್ಟಿ, ಕಾರ್ಕಳ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆ. ಸೊಸೈಟಿಯ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು, ಉಡುಪಿ ಹೋಟೆಲ್ ತ್ರಿವೇಣಿಯ ಗಣಪತಿಶೆಣೈ ನೀರೆಕುದುರು, ಬೈಲೂರು ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷ ಸುಧೀರ್ ಹೆಗ್ಡೆ ನಾಯರ್ ಬೆಟ್ಟು, ಕಣಂಜಾರು ಬ್ರಹ್ಮಲಿಂಗೇಶ್ವರ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ವಿಕ್ರಂ ಹೆಗ್ಡೆ ಕಣಂಜಾರು, ನೀರೆ ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನೀರೆ ರವೀಂದ್ರ ನಾಯಕ್, ಉದ್ಯಮಿಗಳಾದ ಬೈಲೂರು ಸುಧೀರ್ ಹೆಗ್ಡೆ, ಬೈಲೂರು ಚಂದ್ರಶೇಖರ ಮಾಡ ಮತ್ತು ಕುಟುಂಬದ ಇತರ ಸದಸ್ಯರಾದ ರಾಕೇಶ್ ವಾಗ್ಲೆ, ಕಾರ್ತಿಕ್ ವಾಗ್ಲೆ, ನಿಶಾಂತ್ ವಾಗ್ಲೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೀರೆ ಗ್ರಾಮ ಪಂಚಾಯತ್ ವತಿಯಿಂದ ರಾಮಕೃಷ್ಣ ವಾಗ್ಲೆ ಅವರನ್ನು ಸನ್ಮಾನಿಸಲಾಯಿತು. ಲಕ್ಷ್ಮೀಶ ವಾಗ್ಲೆ ಅವರು ಎಲ್ಲರನ್ನು ಸ್ವಾಗತಿಸಿದರು. ಸಂತೋಷ್ ವಾಗ್ಲೆ ವಂದಿಸಿದರು. ಲಾವಣ್ಯ ಲಕ್ಷ್ಮಣ ವಾಗ್ಲೆ ಪ್ರಾರ್ಥನೆ ಸಲ್ಲಿಸಿದರೆ, ದಾಮೋದರ್ ಶರ್ಮ ಕಾರ್ಯಕ್ರಮ ನಿರೂಪಿಸಿದರು.



































