
ಕಾರ್ಕಳ: ಪಡುಬಿದ್ರಿಯಿಂದ ಸ್ಥಳಾಂತರಗೊಂಡು ಪಳ್ಳಿ ಗ್ರಾಮದಲ್ಲಿ ತಲೆ ಎತ್ತುತ್ತಿರುವ ವಿವಾದಿತ ‘ಫಿಷ್ ಮೀಲ್’ ಘಟಕದ ಕಾಮಗಾರಿಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ನಡೆಯುತ್ತಿರುವ ಈ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ ಫೆಬ್ರವರಿ 23 ರ ಸೋಮವಾರದಂದು ಪಳ್ಳಿ ಪಂಚಾಯತ್ ಕಚೇರಿಯ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಘಟನೆಯ ವಿವರ: ಪಳ್ಳಿ ಪಂಚಾಯತ್ ವ್ಯಾಪ್ತಿಯ ಕೊಡಿಮಲೆ ಎಂಬಲ್ಲಿನ ಸರ್ವೆ ಸಂಖ್ಯೆ 229/1 ರ ಸುಮಾರು 3.60 ಎಕರೆ ಜಾಗದಲ್ಲಿ ಈ ಫಿಷ್ ಮೀಲ್ ಘಟಕದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆದರೆ, ಈ ಪ್ರದೇಶವು ಕೃಷಿ ಭೂಮಿಯಾಗಿದ್ದು, ಇಲ್ಲಿ ಕೈಗಾರಿಕಾ ಘಟಕ ಸ್ಥಾಪಿಸಲು ಯಾವುದೇ ಭೂಪರಿವರ್ತನೆ (RTC Conversion) ಮಾಡಲಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಪಂಚಾಯತ್ ಸದಸ್ಯರ ನೇತೃತ್ವದಲ್ಲಿ ಸೇರಿದ ಪ್ರತಿಭಟನಾಕಾರರು, ಒಂದು ವೇಳೆ ಈ ಘಟಕ ಸ್ಥಾಪನೆಯಾದರೆ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ಕೂಡಲೇ ಕಾಮಗಾರಿ ಸ್ಥಗಿತಗೊಳಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಅಕ್ರಮಗಳ ಸರಮಾಲೆ ಪತ್ತೆ ಹಚ್ಚಿದ ಅಧಿಕಾರಿಗಳು: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾರ್ಕಳ ತಹಶೀಲ್ದಾರ್ ಪ್ರದೀಪ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಮೀಳಾ ನಾಯಕ್ ಹಾಗೂ ಗ್ರಾಮ ಆಡಳಿತಾಧಿಕಾರಿ ಅಭಿಷೇಕ್ ಅವರು ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಅಚ್ಚರಿಯ ಅಕ್ರಮಗಳು ಬೆಳಕಿಗೆ ಬಂದಿವೆ:
- ಪರವಾನಗಿ ರಹಿತ ಕಟ್ಟಡ: ಗ್ರಾಮ ಪಂಚಾಯತ್ನಿಂದ ಯಾವುದೇ ಕಟ್ಟಡ ನಿರ್ಮಾಣ ಪರವಾನಗಿ ಅಥವಾ ಇ-ಖಾತಾ ಪಡೆಯದೆ ಅಕ್ರಮವಾಗಿ ಕಾಮಗಾರಿ ಮುಂದುವರಿಸಲಾಗಿತ್ತು.
- ವಿದ್ಯುತ್ ದುರ್ಬಳಕೆ: ಕೃಷಿ ಉದ್ದೇಶದ ಬಾವಿಗೆ ಮಂಜೂರಾಗಿದ್ದ ವಿದ್ಯುತ್ ಸಂಪರ್ಕವನ್ನು ನಿಯಮಬಾಹಿರವಾಗಿ ಈ ವಾಣಿಜ್ಯ ಕಟ್ಟಡದ ನಿರ್ಮಾಣಕ್ಕೆ ಬಳಸುತ್ತಿರುವುದು ದೃಢಪಟ್ಟಿದೆ.
- ಅರಣ್ಯ ನಾಶ: ಜಮೀನಿನಲ್ಲಿದ್ದ ಮರಗಳನ್ನು ಅರಣ್ಯ ಇಲಾಖೆಯ ಅನುಮತಿ ಪಡೆಯದೆಯೇ ಕಡಿದುರುಳಿಸಿರುವುದು ಪತ್ತೆಯಾಗಿದೆ.
ತಕ್ಷಣದ ಕ್ರಮ: ಅಕ್ರಮಗಳನ್ನು ಖಚಿತಪಡಿಸಿಕೊಂಡ ಪಿಡಿಒ ಅವರು ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸುವಂತೆ ಉಸ್ತುವಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ, ಅನಧಿಕೃತವಾಗಿ ಬಳಸುತ್ತಿದ್ದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಮೆಸ್ಕಾಂ ಬೈಲೂರು ಶಾಖೆಗೆ ಪತ್ರ ಬರೆದಿದ್ದಾರೆ. ಗ್ರಾಮಸ್ಥರ ಅಹವಾಲು ಆಲಿಸಿದ ತಹಶೀಲ್ದಾರರು, ಕಾನೂನು ಬಾಹಿರವಾಗಿ ನಡೆಯುತ್ತಿರುವ ಈ ಘಟಕದ ಬಗ್ಗೆ ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಉಷಾ ಎ ಅಂಚನ್, ಶ್ರೀಕಾಂತ್ ಪ್ರಭು, ಸಂದೀಪ್ ಅಮೀನ್, ವಿಜಯ್ ಎಂ. ಶೆಟ್ಟಿ, ಸಂತೋಷ್ ಶೆಟ್ಟಿ ನಿಂಜೂರು ಹಾಗೂ ವಿಶೇಷ್ ದೇವಾಡಿಗ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.



































