

ಕಾರ್ಕಳ: ಕಾರ್ಕಳ ತಾಲೂಕು ಪರಿಶಿಷ್ಟ ವರ್ಗಗಳ ವಿವಿದ್ದೋದ್ದೇಶ ಸಹಕಾರಿ ಸಂಘ (LAMPS)ನ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆಯಲ್ಲಿ ಪ್ರಬಲ ವಿವಾದ ಸೃಷ್ಟಿಯಾಗಿದೆ. ಜನವರಿ 31ರಂದು ನಡೆದ ನಿರ್ದೇಶಕರ ಚುನಾವಣೆಯ ಬಳಿಕ, ಫೆಬ್ರವರಿ 11ರಂದು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಆದರೆ, ಚುನಾವಣೆ ಪ್ರಕ್ರಿಯೆ ಬಗ್ಗೆ ಪ್ರಶ್ನೆಗಳು ಎದ್ದಿವೆ.ಈ ಚುನಾವಣೆಯಲ್ಲಿ ಹತ್ತು ಮಂದಿ ನಿರ್ದೇಶಕರು ಮತ್ತು ಮೂರು ಮಂದಿ ಅಧಿಕಾರಿಗಳಿಗೆ ಮತ ಚಲಾಯಿಸುವ ಹಕ್ಕು ಇರುತ್ತದೆ. ಒಟ್ಟು ಹದಿಮೂರು ಮತಗಳು.
ಪ್ರತಿಭಟನಾಕಾರರ ಹೇಳಿಕೆಯಂತೆ ಅಧ್ಯಕ್ಷರ ಚುನಾವಣೆಯಲ್ಲಿ ಇಬ್ಬರು ಸ್ಪರ್ಧಿಗಳು ತಲಾ 6-6 ಮತ ಪಡೆದು ಸಮಬಲ ಸಾಧಿಸಿದರೆ, ಒಂದು ಮತ ಅಸಿಂಧು ಎಂದು ಘೋಷಿಸಲಾಯಿತು. ಪ್ರಕ್ರಿಯೆಯಲ್ಲಿಯೇ ಗೊಂದಲ ಉಂಟಾಗಿದ್ದು, ಯಾವುದೇ ಪರ್ಯಾಯ ವಿಧಾನ ಅಳವಡಿಸದೆ, ಚುನಾವಣಾಧಿಕಾರಿಗಳು ಏಕಪಕ್ಷೀಯವಾಗಿ ರಾಘವ ನಾಯ್ಕ್ ಅವರನ್ನು ಆಯ್ಕೆ ಮಾಡಿದ್ದಾರೆ.
ಇದನ್ನು ಖಂಡಿಸಿ ನಾವು ಲಿಖಿತ ರೂಪದಲ್ಲಿ ದೂರು ನೀಡಿದರೂ ಅದನ್ನು ಸ್ವೀಕರಿಸಲಿಲ್ಲ. ಚುನಾವಣೆಯ ವೇಳೆಯಲ್ಲಿ ಸಿ ಸಿ ಕ್ಯಾಮರಾ ಪೊಲೀಸ್ ವ್ಯವಸ್ಥೆ ಯಾವುದು ಇರಲಿಲ್ಲ. ಬ್ಯಾಂಕ್ ನ CEO ಅಸಿಂಧು ಎಂದು ಘೋಷಿಸಿದರು. ಚುನಾವಣಾಧಿಕಾರಿಯಾದ ರೋಹಿತ್ ರವರಲ್ಲಿ ನಾವು ಪ್ರಶ್ನಿಸಿದ್ದಕ್ಕೆ ಅವರು ಚುನಾವಣಾಧಿಕಾರಿ ನಾನೋ ಅಥವಾ ನೀವೋ ಎಂಬ ಬೇಜವಾಬ್ಧಾರಿತನದ ಉತ್ತರವನ್ನು ನೀಡಿದರು ಮತ್ತು ನಿಮ್ಮ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದೀರಿ ಎಂದು ದೂರು ದಾಖಲಿಸಲಾಗುವುದು ಎಂದು ಬೆದರಿಸಿದ್ದಾರೆ.
ಇಲ್ಲಿ ಚುನಾವಣೆಗೆ ಅವಕಾಶವಿರುವುದು ಪರಿಶಿಷ್ಟ ವರ್ಗಗಳಾದ ಮಲೆಕುಡಿಯ ,ಕೊರಗ,ಮರಾಠಿ ಸಮುದಾಯದವರಿಗೆ. ಈ ರೀತಿ ಅವರ ಮೇಲೆ ದಬ್ಬಾಳಿಕೆ ನಡೆಸಿ ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನವನ್ನು ಚುನಾವಣಾಧಿಕಾರಿ ಮಾಡಿರುತ್ತಾರೆ. ನಾವು ಇದರ ಬಗ್ಗೆ ಎ . ಆರ್ ಮತ್ತು ಡಿ . ಆರ್ ರವರಿಗೆ ದೂರು ನೀಡಿದರೂ ಈ ವರೆಗೆ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ.
ಇಂದು ಮೊದಲ ಸಾಮಾನ್ಯ ಸಭೆಯಾಗಿದ್ದು ನಾವು ನಿರ್ದೇಶಕ ಸದಸ್ಯರುಗಳು ಸಾಮಾನ್ಯ ಸಭೆಗೆ ಭಾಗವಹಿಸದೆ ಪ್ರತಿಭಟನೆ ನಡೆಸುತ್ತಿದ್ದೇವೆ. ನಮಗೆ ಸರಿಯಾದ ನ್ಯಾಯ ನೀಡಬೇಕು. ಚುನಾವಣೆಯನ್ನು ನಾಣ್ಯ ಚಿಮ್ಮಿಸುವುದರ ಮೂಲಕ ಅಥವಾ ಚೀಟಿ ಎತ್ತುವುದರ ಮೂಲಕ ನಡೆಸಲಿ. ಅದನ್ನು ಹೊರತು ಪಡಿಸಿ ಏಕ ಪಕ್ಷೀಯವಾಗಿ ಆಯ್ಕೆ ಮಾಡಿರುವುದು ನ್ಯಾಯ ಸಮ್ಮತವಲ್ಲ.ಡಿ. ಆರ್ ರವರು ಮದ್ಯ ಪ್ರವೇಶಿಸಿ ಮರು ಚುನಾವಣೆ ನಡೆಸಬೇಕಾಗಿ ನಾವು ಅವರಲ್ಲಿ ವಿನಂತಿಸುತ್ತಿದ್ದೇವೆ.ಇಲ್ಲವಾದಲ್ಲಿ ನ್ಯಾಯ ಸಿಗುವವರೆಗೂ ನಮ್ಮ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಹೋರಾಟಗಾರರು ತಿಳಿಸಿದ್ದಾರೆ.