
ಕಾರ್ಕಳ: ಕರಾವಳಿಯ ಸಾಂಸ್ಕೃತಿಕ ನಗರಿ ಕಾರ್ಕಳದಲ್ಲಿ ರಾಜಕೀಯ ಸಂಚಲನ ಮೂಡಿಸಲು ಕಾಂಗ್ರೆಸ್ ಸನ್ನದ್ಧವಾಗಿದೆ. ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಕಳ, ಹೆಬ್ರಿ ಹಾಗೂ ಯುವ ಕಾಂಗ್ರೆಸ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಬೃಹತ್ ‘ಕಾಂಗ್ರೆಸ್ ಕ್ರೀಡೋತ್ಸವ’ ಮತ್ತು ಕಿಸಾನ್ ಸಭಾಂಗಣದ ಉದ್ಘಾಟನಾ ಸಮಾರಂಭದ ಪೂರ್ವಸಿದ್ಧತಾ ಸಭೆಯು ಶನಿವಾರ ಕಾರ್ಕಳದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಯಶಸ್ವಿಯಾಗಿ ಜರುಗಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖಂಡ ಉದಯ ಶೆಟ್ಟಿ ಮುನಿಯಾಲು ಅವರು, ಈ ಬಾರಿಯ ಕಾರ್ಯಕ್ರಮವು ಇತಿಹಾಸ ಸೃಷ್ಟಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಅವರ ಮಾರ್ಗದರ್ಶನದಲ್ಲಿ ನಡೆಯುವ ಕಿಸಾನ್ ಸಭಾಂಗಣದ ಲೋಕಾರ್ಪಣೆಗೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿರುವುದು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ. ವಿಶೇಷವಾಗಿ ಕಾರ್ಕಳದ ಇತಿಹಾಸದಲ್ಲೇ ಮೊದಲ ಬಾರಿಗೆ ರಾತ್ರಿ ವೇಳೆ (ಹೊನಲು ಬೆಳಕಿನಲ್ಲಿ) ಅಥ್ಲೆಟಿಕ್ ಕ್ರೀಡಾಕೂಟ ಆಯೋಜನೆಯಾಗುತ್ತಿದ್ದು, ಇದನ್ನು ಹಬ್ಬದಂತೆ ಆಚರಿಸಲು ಅವರು ಕರೆ ನೀಡಿದರು.
ರಾಜ್ಯ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ ಮಾತನಾಡಿ, ಈ ಕಾರ್ಯಕ್ರಮದ ಯಶಸ್ಸು ಕೇವಲ ಸಮಿತಿಯದ್ದಲ್ಲ, ಬದಲಾಗಿ ಪ್ರತಿ ಕಾರ್ಯಕರ್ತನ ಜವಾಬ್ದಾರಿಯಾಗಿದೆ ಎಂದರು. ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್ ಮಾತನಾಡಿ, ಸ್ಥಳೀಯ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ನಮ್ಮ ಮೂಲ ಉದ್ದೇಶ. ಹೊನಲು ಬೆಳಕಿನ ಈ ಕ್ರೀಡಾ ಸಂಭ್ರಮವು ಕಾರ್ಕಳದ ಕ್ರೀಡಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲಾಗಲಿದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಜಾರ್ಜ್ ಕ್ಯಾಸ್ತಲಿನೊ ಮಾಹಿತಿ ನೀಡಿದರು. ಸಭೆಯಲ್ಲಿ ಸುಧಾಕರ್ ಕೋಟ್ಯಾನ್, ಭಾನು ಭಾಸ್ಕರ್ ಪೂಜಾರಿ, ಸೂರಜ್ ಶೆಟ್ಟಿ ನಕ್ರೆ ಸೇರಿದಂತೆ ಹೆಬ್ರಿ ಮತ್ತು ಕಾರ್ಕಳ ತಾಲೂಕಿನ ಪ್ರಮುಖ ನಾಯಕರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಪ್ರಸನ್ನ ಶೆಟ್ಟಿಗಾರ್ ಸ್ವಾಗತಿಸಿದರೆ, ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರೂಪಿಸಿದರು ಮತ್ತು ಯೋಗೀಶ್ ಆಚಾರ್ಯ ಇನ್ನಾ ವಂದಿಸಿದರು.



































