
ಕಾರ್ಕಳ: ಐತಿಹಾಸಿಕ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಗ್ಗೆ ಸುಳ್ಳು ಮಾಹಿತಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ ಆರೋಪದಡಿ, ಬಿಜೆಪಿ ಐಟಿ ಸೆಲ್ನ ಯುವಕನ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ಕಳ ತಾಲೂಕಿನ ಈದು ಗ್ರಾಮದ ನಿವಾಸಿ ಪ್ರಖ್ಯಾತ್ ಬಿ.ಜೆ. ಎಂಬಾತ ಈ ಪ್ರಕರಣದ ಕೇಂದ್ರಬಿಂದುವಾಗಿದ್ದಾನೆ. ಈತ ವಾಟ್ಸ್ಆ್ಯಪ್, ಫೇಸ್ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ “ಸರ್ಕಾರದ ಬೆಲೆ ಏರಿಕೆಯ ಬಿಸಿ ದೇವಸ್ಥಾನದ ಸೇವೆಗೂ ತಟ್ಟಿದೆ” ಎಂದು ಸುಳ್ಳು ಸಂದೇಶ ಹಾಗೂ ಅವಹೇಳನಕಾರಿ ಪದಗಳನ್ನು ಬಿತ್ತರಿಸಿ ಸಮಾಜದ ಶಾಂತಿಯನ್ನು ಕದಡುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಖ್ಯಾತ್ ಈ ಹಿಂದೆಯೂ ರಾಷ್ಟ್ರ ಮತ್ತು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್ಗಳನ್ನು ಹಾಕಿದ್ದ ಎಂದು ದೂರಲಾಗಿದೆ. ಆ ಸಂದರ್ಭದಲ್ಲಿ ದೂರು ದಾಖಲಾಗಿದ್ದಾಗ, “ಮುಂದೆ ಇಂತಹ ಪೋಸ್ಟ್ಗಳನ್ನು ಹಾಕುವುದಿಲ್ಲ” ಎಂದು ಮುಚ್ಚಳಿಕೆ ಬರೆದು ಕಾನೂನು ಕ್ರಮದಿಂದ ತಪ್ಪಿಸಿಕೊಂಡಿದ್ದ. ಆದರೆ ಈಗ ಮತ್ತೊಮ್ಮೆ ಮುಖ್ಯಮಂತ್ರಿಗಳ ವಿರುದ್ಧ ಸುಳ್ಳು ಆರೋಪಗಳನ್ನು ಸೃಷ್ಟಿಸಿ, ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಕೂಡಲೇ ಪ್ರಖ್ಯಾತ್ ಅವರನ್ನು ವಿಚಾರಣೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾರ್ಕಳ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜೋಗಿ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.



































