
ಕಾರ್ಕಳ: ಇಲ್ಲಿನ ಎಸ್.ವಿ.ಟಿ. ಶಾಲಾ ರಸ್ತೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸೇವಾ ಕೇಂದ್ರದಲ್ಲಿ ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ವಿನೂತನ ‘ಸಹಸ್ರ ಲಿಂಗ ದರ್ಶನ’ ಕಾರ್ಯಕ್ರಮ ಫೆಬ್ರವರಿ 15ರಂದು ಅದ್ದೂರಿಯಾಗಿ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎನ್.ಪಿ. ಗ್ರೂಪ್ನ ಚೇರ್ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ವಾಸುದೇವ್ ಭಟ್, “ಶಿವರಾತ್ರಿಯ ಈ ಪುಣ್ಯ ಕಾಲದಲ್ಲಿ ಸಹಸ್ರ ಲಿಂಗ ದರ್ಶನದ ಮೂಲಕ ಸರ್ವರಿಗೂ ಪರಮಾತ್ಮ ಶಿವನ ಅನುಗ್ರಹ ಪ್ರಾಪ್ತಿಯಾಗಲಿ” ಎಂದು ಹಾರೈಸಿದರು.

ಉಡುಪಿ ಜಿಲ್ಲಾ ಧಾರ್ಮಿಕ ಹಾಗೂ ದತ್ತಿ ಇಲಾಖೆಯ ಸದಸ್ಯ ಕೃಷ್ಣಮೂರ್ತಿ ಮಾತನಾಡಿ, ದೈವದ ಮೇಲಿನ ನಂಬಿಕೆ ಮತ್ತು ವಿಶ್ವಾಸದಿಂದಲೇ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದರು. ಭಾರತೀಯ ಜೇಸಿಸ್ ವಲಯ ಕಾರ್ಯದರ್ಶಿ ಸಮದ್ ಖಾನ್, “ಧರ್ಮ ಎಂಬುದು ಶರೀರಕ್ಕೆ ಸಂಬಂಧಿಸಿದ ವಿಷಯ, ನಾವೆಲ್ಲರೂ ಒಬ್ಬನೇ ಪರಮಾತ್ಮನ ಮಕ್ಕಳು” ಎಂಬ ಐಕ್ಯತೆಯ ಸಂದೇಶ ನೀಡಿದರು. ರೋಟರಿ ಕ್ಲಬ್ ಅಧ್ಯಕ್ಷ ನವೀನಚಂದ್ರ ಶೆಟ್ಟಿ ಅವರು ಧ್ಯಾನ ಮಂದಿರದ ಪವಿತ್ರ ವಾತಾವರಣದಲ್ಲಿ ಪರಮಾತ್ಮನ ಅನುಭೂತಿ ಸಹಜವಾಗಿ ಲಭಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ವಿಶ್ವಶಾಂತಿಯೇ ಸಂಸ್ಥೆಯ ಗುರಿ:
ಕಾರ್ಕಳ ಸೇವಾಕೇಂದ್ರದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ವಿಜಯಲಕ್ಷ್ಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ಪರಮಾತ್ಮನು ಸರ್ವ ಧರ್ಮದವರಿಗೂ ಒಬ್ಬನೇ ಆಗಿದ್ದಾನೆ. ಧರ್ಮಗ್ಲಾನಿಯ ಈ ಸಮಯದಲ್ಲಿ ಪರಮಾತ್ಮನು ಪ್ರಜಾಪಿತ ಬ್ರಹ್ಮನ ಶರೀರದ ಮೂಲಕ ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದಾರೆ. ಇಂದು 140 ರಾಷ್ಟ್ರಗಳಲ್ಲಿ ಈ ಸಂಸ್ಥೆ ಶಾಂತಿಯ ಕಾರ್ಯ ಮಾಡುತ್ತಿದೆ” ಎಂದರು. ಅಲ್ಲದೆ, ಸಾರ್ವಜನಿಕರು ಇಲ್ಲಿ ಉಚಿತವಾಗಿ ನೀಡಲಾಗುವ ರಾಜಯೋಗ ಶಿಕ್ಷಣದ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಿ.ಕೆ. ಶಾಂತ ಸ್ವಾಗತಿಸಿದರು, ಬಿ.ಕೆ. ಗಾಯತ್ರಿ ವಂದಿಸಿದರು ಮತ್ತು ಬಿ.ಕೆ. ವರದರಾಯ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.



































