
ಶಿವಮೊಗ್ಗ:‘ಕಾಂತಾರ: ದ ಲೆಜೆಂಡ್ ಪಾರ್ಟ್ 1’ ಚಿತ್ರದ ಚಿತ್ರೀಕರಣಕ್ಕೆ ಬಳಸಲಾಗಿದ್ದ ಹಡಗಿನ ಆಕೃತಿಯ ಸೆಟ್ ಜೂನ್ 14ರಂದು ಸಂಜೆ ಹವಾಮಾನ ವೈಪರಿತ್ಯದಿಂದ ಸ್ವಲ್ಪ ಮಟ್ಟಿಗೆ ವಾಲಿದ್ದವು ನಿಜ. ಆದರೆ, ಈ ಘಟನೆಯಲ್ಲಿ ಯಾವುದೇ ವ್ಯಕ್ತಿಗೂ ಅಥವಾ ಆಸ್ತಿಗೂ ಹಾನಿಯಾಗಿಲ್ಲ ಎಂದು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸ್ಪಷ್ಟಪಡಿಸಿದೆ.
ಹಡಗು ಮಗುಚಿಬಿದ್ದಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಹೊಸನಗರ ತಹಶೀಲ್ದಾರ್ ಕಚೇರಿಯಿಂದ ನೋಟಿಸ್ ನೀಡಲಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ನಿರ್ಮಾಣ ಸಂಸ್ಥೆ, ಆ ವೇಳೆ ಚಿತ್ರೀಕರಣ ನಡೆಯುತ್ತಿರಲಿಲ್ಲ ಹಾಗೂ ಆ ಸೆಟ್ ಬಳಿ ಯಾರೂ ಹಾಜರಿರಲಿಲ್ಲ ಎಂದು ತಿಳಿಸಿದೆ.
“ಈ ಹಡಗಿನ ಆಕೃತಿಯ ರಚನೆ ಕೇವಲ ದೃಶ್ಯಪಟದ ಹಿನ್ನೆಲೆಗೆ ಮಾತ್ರ ಬಳಸಲಾಗುತ್ತಿತ್ತು. ಚಿತ್ರೀಕರಣದ ಮುಖ್ಯ ಭಾಗ ಇದಲ್ಲ. ಯಾವುದೇ ಕಲಾವಿದ, ಸಿಬ್ಬಂದಿ, ಆಸ್ತಿ ಅಥವಾ ಉಪಕರಣಗಳಿಗೆ ಯಾವುದೇ ಹಾನಿಯಿಲ್ಲ. ಶೂಟಿಂಗ್ಗೆ ಅಗತ್ಯವಿರುವ ಎಲ್ಲ ಅನುಮತಿಗಳನ್ನು ಪ್ರಾಧಿಕಾರಗಳಿಂದ ಪಡೆದು ಕ್ರಮಬದ್ಧವಾಗಿ ಚಿತ್ರೀಕರಣ ಮುಂದುವರಿಸಲಾಗಿದೆ,” ಎಂದು ಹೊಂಬಾಳೆ ಫಿಲ್ಮ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮರುದಿನವೇ ಕಲಾವಿದರು ಮತ್ತು ಸಿಬ್ಬಂದಿಯು ಪುನಃ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಉಂಟಾದ ಗೊಂದಲ ನಿವಾರಿಸಲು ಸಂಸ್ಥೆಯು ಸ್ಪಷ್ಟನೆ ನೀಡಿರುವುದು ಪ್ರಮುಖವಾಗಿದೆ.