
ಕಲಬುರಗಿ: ನಗರದಲ್ಲಿ ಭಾನುವಾರ (ಜ. 11) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಸಿಎಂ ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯದ ಬಗ್ಗೆ ಲೇವಡಿ ಮಾಡಿದರು. “ಕುಮಾರಸ್ವಾಮಿ ಅವರು ಮುಂದಿನ ದಿನಗಳಲ್ಲಿ ಯಾವ ಪಕ್ಷದ ಮೂಲಕ ರಾಜ್ಯ ರಾಜಕಾರಣಕ್ಕೆ ಮರಳಲಿದ್ದಾರೆ ಎನ್ನುವುದೇ ದೊಡ್ಡ ಪ್ರಶ್ನೆ. ಈಗಾಗಲೇ ಅವರು ಗುರುತಿಸಿಕೊಂಡಿರುವ ಮೈತ್ರಿ ಪಾಳಯದಲ್ಲಿ ಬಿಜೆಪಿ ತನ್ನ ಬಲವಾದ ಕೋಟೆಯನ್ನು ಕಟ್ಟಿಕೊಂಡಿದೆ. ಹೀಗಿರುವಾಗ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅಸ್ತಿತ್ವ ಎಲ್ಲಿದೆ?” ಎಂದು ಅವರು ಪ್ರಶ್ನಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಅನಿವಾರ್ಯತೆಯನ್ನು ಟೀಕಿಸಿದ ಅವರು, ಸ್ವತಃ ಕುಮಾರಸ್ವಾಮಿ ಅವರ ಆಪ್ತರು ಅಥವಾ ಸಂಬಂಧಿಕರೇ ಬಿಜೆಪಿ ಚಿಹ್ನೆಯಡಿ ಸ್ಪರ್ಧಿಸುತ್ತಿರುವುದು ಜೆಡಿಎಸ್ನ ದೌರ್ಬಲ್ಯವನ್ನು ತೋರಿಸುತ್ತದೆ. ಈ ಹಿಂದೆ ರಾಜ್ಯದ ಚುಕ್ಕಾಣಿ ಹಿಡಿದಿದ್ದಾಗಲೂ ಕುಮಾರಸ್ವಾಮಿ ಅವರು ಸಾಧಿಸಿದ್ದೇನು? ಎರಡೂ ಪಕ್ಷಗಳು ಎಂದೂ ಸಹ ತಮ್ಮ ಸ್ವಂತ ಬಲದ ಮೇಲೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ಅಧಿಕಾರದ ಆಸೆಗಾಗಿ ಪರಸ್ಪರ ಕೈಕಾಲಿಗೆ ಬಿದ್ದು ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿಯ ಪಾದಯಾತ್ರೆ ಕೇವಲ ಆರೋಗ್ಯಕ್ಕೆ ಸೀಮಿತ: ಇದೇ ವೇಳೆ ಬಿಜೆಪಿಯ ಬಳ್ಳಾರಿ ಪಾದಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, “ನಾವು ಹಿಂದೆ ಮೇಕೆದಾಟು, ಕೃಷ್ಣಾ ಮತ್ತು ಕಾವೇರಿ ಹಿತರಕ್ಷಣೆಗಾಗಿ ಹೋರಾಟ ಮಾಡಿದ್ದೆವು. ಆದರೆ ಬಿಜೆಪಿಯ ಈ ಪಾದಯಾತ್ರೆಗೆ ಯಾವುದೇ ಸದುದ್ದೇಶ ಅಥವಾ ಜನಪರ ಕಾಳಜಿ ಇಲ್ಲ. ಇದು ಕೇವಲ ವ್ಯಾಯಾಮದಂತೆ ಅವರ ಆರೋಗ್ಯಕ್ಕೆ ಒಳ್ಳೆಯದಾಗಬಹುದೇ ಹೊರತು, ಜನರಿಂದ ಯಾವುದೇ ಬೆಂಬಲ ಸಿಗುವುದಿಲ್ಲ. ಕೇವಲ ಬೆರಳೆಣಿಕೆಯಷ್ಟು ಜನರೊಂದಿಗೆ ಇವರು ಪಾದಯಾತ್ರೆ ನಡೆಸುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.



































