
ಕಾರ್ಕಳದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಕೆ.ಎಂ.ಇ.ಎಸ್ ನ ಪ್ರಾಂಶುಪಾಲರಾಗಿ ಕೆ.ಬಾಲಕೃಷ್ಣರಾವ್ರವರು ದಿನಾಂಕ:27/05/2025ರಂದು ಅಧಿಕಾರ ಸ್ವೀಕರಿಸಿರುತ್ತಾರೆ. ಶ್ರೀಯುತರು ಆಂಗ್ಲಭಾಷೆ ಹಾಗೂ ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ನಲವತ್ತು ವರ್ಷಗಳ ದೀರ್ಘಕಾಲ ವಿಜ್ಞಾನ ಶಿಕ್ಷಕರಾಗಿ, ಆಂಗ್ಲಭಾಷಾ ಮತ್ತು ಗಣಿತ ಉಪನ್ಯಾಸಕರಾಗಿ ಶೈಕ್ಷಣಿಕ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದು, ಬೇರೆ ಬೇರೆ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ಎನ್.ಸಿ.ಸಿ ನೇವಲ್ ವಿಂಗ್ ಕಮಿಶನ್ಸ್ ಆಫೀಸರಾಗಿ ಹದಿನೈದು ವರ್ಷಗಳ ಸೇವೆ ಸಲ್ಲಿಸಿದ ಇವರು ಕೊಚ್ಚಿನ್ ನೇವಲ್ಸ್, ವಿಶಾಖಪಟ್ಟಣ ನೇವಲ್ ಬೇಸ್ಗಳಲ್ಲಿ ಎನ್.ಸಿ.ಸಿ ತರಬೇತಿಗಳನ್ನು ಪಡೆದಿರುತ್ತಾರೆ. ಉತ್ತರ ಭಾರತದ ಮಸ್ಸೂರಿ, ಗೋವಾ ಇತ್ಯಾದಿ ಸ್ಥಳಗಳಲ್ಲಿ ರಾಷ್ಟ್ರೀಯ ಟ್ರಕ್ಕಿಂಗ್ ಎಕ್ಸ್ಪೆಡಿಶನ್ನಲ್ಲಿ ಭಾಗವಹಿಸಿದ್ದು, ಬೆಂಗಳೂರಿನ ಸೋಮನ ಹಳ್ಳಿಯಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸಿರುತ್ತಾರೆ. ಶ್ರೀಯುತರು ಕನ್ನಡ, ಇಂಗ್ಲೀಷ್ ಭಾಷೆಗಳಲ್ಲಿ ಲೇಖನಗಳನ್ನು ಬರೆದಿರುತ್ತಾರೆ. ಆಕಾಶವಾಣಿ ಮಂಗಳೂರಿನಲ್ಲಿ ಕಥೆ, ಚಿಂತನ, ಪ್ರಬಂಧಗಳನ್ನು ಮಂಡಿಸಿ, ಸಾಹಿತ್ಯದಲ್ಲಿಯೂ ಅಭಿರುಚಿಯನ್ನು ಹೊಂದಿರುತ್ತಾರೆ. ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಇವರು ಕಾರ್ಕಳ ಸಾಹಿತ್ಯ ಸಂಘ ಮತ್ತು ಅಖಿಲ ಭಾರತ ಸಾಹಿತ್ಯ ಪರಿಷದ್ ಕಾರ್ಕಳ ಇವುಗಳ ಸಕ್ರೀಯ ಸದಸ್ಯರಾಗಿರುತ್ತಾರೆ. ನಾಟಕ, ಯಕ್ಷಗಾನಗಳಲ್ಲಿ ಪಾತ್ರ ನಿರ್ವಹಿಸಿರುತ್ತಾರೆ. ಹಲವಾರು ಕನ್ನಡ ಸಾಹಿತ್ಯ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದು, ಕವನವಾಚನ ಮಾಡಿರುತ್ತಾರೆ. ಕಾರ್ಕಳ ಇಂಟರಾಕ್ಟ್ ಕ್ಲಬ್ ನ ಸಂಯೋಜಕರಾಗಿಯೂ, ಕಾರ್ಕಳ ಜೇಸೀಸ್ ಸಂಸ್ಥೆಯ ಸಕ್ರಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಶ್ರೀಯುತರು ಹಲವಾರು ಸಂಘ ಸಂಸ್ಥೆಗಳಿಂದ ಗೌರವ ಪುರಸ್ಕಾರಗಳನ್ನು ಪಡೆದಿರುತ್ತಾರೆ. ಇತ್ತೀಚಿಗೆ ಶ್ರೀಯುತರು ಬರೆದಿರುವ ಕನ್ನಡ ಕಾದಂಬರಿ ‘ಪಥ’ ಬಿಡುಗಡೆಯಾಗಿದೆ.
ಇವರು ಈ ವಿದ್ಯಾಸಂಸ್ಥೆಗೆ ಪ್ರಾಂಶುಪಾಲರಾಗಿ ನೇಮಕಗೊಂಡಿರುವುದಕ್ಕೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ.ಎಸ್ ಇಮ್ಮಿಯಾಜ್ ಅಹಮ್ಮದ್ರವರು ಶ್ರೀಯುತರಿಗೆ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.