
ಕೊಚ್ಚಿ : ಅಪಹರಣ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಖ್ಯಾತ ನಟಿ ಲಕ್ಷ್ಮಿ ಮೆನನ್ ಸೇರಿದಂತೆ ಇತರರ ವಿರುದ್ಧ ಕೊಚ್ಚಿ ಪೊಲೀಸರು ದೂರು ದಾಖಲಿಸಿದ್ದಾರೆ. ಬಾರ್ನಲ್ಲಿ ನಡೆದ ಜಗಳದ ಪ್ರತೀಕಾರವಾಗಿ ಐಟಿ ಉದ್ಯೋಗಿಯೊಬ್ಬರನ್ನು ಅಪಹರಿಸಿ, ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.
ಘಟನೆ ವಿವರ: ಆಗಸ್ಟ್ 24ರ ರಾತ್ರಿ ಕೊಚ್ಚಿಯ ಬಾರ್ ಒಂದರಲ್ಲಿ ಎರಡು ಗುಂಪುಗಳ ನಡುವೆ ಜಗಳ ಉಂಟಾಗಿದೆ. ಈ ಜಗಳ ರಸ್ತೆಯಲ್ಲಿಯೂ ಮುಂದುವರೆದಿದ್ದು, ಈ ವೇಳೆ ನಟಿ ಲಕ್ಷ್ಮಿ ಮೆನನ್ ಮತ್ತು ಅವರ ಸ್ನೇಹಿತರಾದ ಮಿಥುನ್, ಅನೀಶ್ ಹಾಗೂ ಸೋನಮೋಲ್ ಎಂಬುವವರು ಆಲುವಾ ನಿವಾಸಿ ಅಲಿಯಾರ್ ಷಾ ಸಲೀಮ್ ಎಂಬುವವರನ್ನು ಬಲವಂತವಾಗಿ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಆತನನ್ನು ಬೆದರಿಸಿ ಆಲುವಾ-ಪರವೂರ್ ಜಂಕ್ಷನ್ನಲ್ಲಿ ಬಿಟ್ಟಿದ್ದಾರೆ.
ಪೊಲೀಸ್ ತನಿಖೆ: ಹಲ್ಲೆಗೊಳಗಾದ ಅಲಿಯಾರ್ ಷಾ ಸಲೀಮ್ ಎಫ್ಐಆರ್ ದಾಖಲಿಸಿದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಯ ವಿಡಿಯೋ ಸಾಕ್ಷ್ಯದಲ್ಲಿ ನಟಿಯ ಉಪಸ್ಥಿತಿ ತಿಳಿದುಬಂದಿದೆ. ಪೊಲೀಸರು ಮಿಥುನ್, ಅನೀಶ್ ಮತ್ತು ಸೋನಮೋಲ್ ಅವರನ್ನು ಬಂಧಿಸಿದ್ದು, ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟಿ ಲಕ್ಷ್ಮಿ ಮೆನನ್ ತಲೆಮರೆಸಿಕೊಂಡಿದ್ದಾರೆ. ನಟಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತೆ ಸೋನಮೋಲ್ ಕೂಡ ಹಲ್ಲೆಗೆ ಒಳಗಾದ ವ್ಯಕ್ತಿಯ ಗುಂಪಿನ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಲಕ್ಷ್ಮಿ ಮೆನನ್ ಅವರು ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ʻಕುಮ್ಕಿʼ, ʻಜಿಗರ್ತಾಂಡʼ, ʻವೇದಾಲಂʼ ಮತ್ತು ʻಚಂದ್ರಮುಖಿ 2ʼ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.