
ಉಡುಪಿ: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಉಡುಪಿ ಜಿಲ್ಲೆಯ ಇಷ್ಟ ಮಹಾಲಿಂಗೇಶ್ವರ ಕಲಾತಂಡವು ತನ್ನ ಅತ್ಯುತ್ತಮ ಪ್ರದರ್ಶನಕ್ಕಾಗಿ ಪ್ರಥಮ ಬಹುಮಾನವನ್ನು ಪಡೆದು ಜಿಲ್ಲೆಗೆ ಗೌರವ ತಂದಿದೆ.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರ ಮಾರ್ಗದರ್ಶನ ಮತ್ತು ನಿರ್ದೇಶನದಂತೆ ಈ ತಂಡವು ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಒಟ್ಟು 112 ಕಲಾತಂಡಗಳು ಈ ಬಾರಿಯ ಮೆರವಣಿಗೆಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಎಲ್ಲಾ ತಂಡಗಳ ನಡುವೆ ಉಡುಪಿಯ ಪಡುಬೈಲೂರಿನ ಇಷ್ಟ ಮಹಾಲಿಂಗೇಶ್ವರ ತಂಡ ನೀಡಿದ ಹುಲಿವೇಷ ಪ್ರದರ್ಶನವು ತೀರ್ಪುಗಾರರ ಮನಗೆದ್ದು ಅಗ್ರ ಸ್ಥಾನ ಪಡೆಯಿತು. ಈ ಗೆಲುವು ಕರಾವಳಿಯ ಜಾನಪದ ಕಲೆಯ ಶ್ರೀಮಂತಿಕೆಗೆ ಮತ್ತೊಮ್ಮೆ ಹೆಮ್ಮೆಯ ಗರಿ ಮೂಡಿಸಿದೆ.
































