
ಉಡುಪಿ : ಅತ್ಯಂತ ಪ್ರಸಿದ್ಧವಾದ ಉಡುಪಿಯ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಹೋತ್ಸವದ ವೈಭವವನ್ನು ವಿವಿಧ ಸ್ಪರ್ಧೆ, ಭಜನಾ ಕಮ್ಮಟ, ಧಾರ್ಮಿಕ ಪ್ರವಚನ, ವಿಚಾರ ಸಂಕಿರಣ ಮುಂತಾದ ಹತ್ತು ಹಲವು ಕಾರ್ಯಕ್ರಮಗಳೊಂದಿಗೆ 48 ದಿನಗಳ ಕಾಲ ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲು ಪೂಜ್ಯ ಪರ್ಯಾಯ ಶ್ರೀಪಾದರ ಮಾರ್ಗದರ್ಶನದಲ್ಲಿ ಶ್ರೀಕೃಷ್ಣ ಮಠದ ಆಡಳಿತ ಮಂಡಳಿಯು ನಿರ್ಧರಿಸಿದೆ.
ಈ ವೈಶಿಷ್ಟ್ಯಪೂರ್ಣ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಇಂದು ಪೂಜ್ಯ ಪರ್ಯಾಯ ಶ್ರೀಪಾದರು ಗೀತಾಮಂದಿರದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ದಿವಾನರಾದ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರತೀಶ್ ತಂತ್ರಿ, ರಮೇಶ್ ಭಟ್, ಕೃಷ್ಣಪ್ರಸಾದ್, ರಮಣಾಚಾರ್ಯ ಮುಂತಾದವರು ಉಪಸ್ಥಿತರಿದ್ದರು.
ಈ ಮಂಡಲೋತ್ಸವ ಸಮಿತಿಯು ಮಾನ್ಯ ಶಾಸಕರಾದ ಶ್ರೀ ಯಶಪಾಲ್ ಸುವರ್ಣರವರ ಗೌರವಾಧ್ಯಕ್ಷತೆಯಲ್ಲಿ ನಡೆಯಲಿದ್ದು, ಉತ್ಸವದ ಕಾರ್ಯಕ್ರಮಗಳನ್ನು ಕರ್ನಾಟಕ ಸರಕಾರದ ರಾಜ್ಯಪಾಲರಾದ ಸನ್ಮಾನ್ಯ ಶ್ರೀ ಥಾವರ್ ಚಂದ್ ಗೆಹ್ಲೊಟ್ ರವರು ಈ ತಿಂಗಳ 25 ಶುಕ್ರವಾರದಂದು ಉದ್ಘಾಟಿಸಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.