
ದಾವಣಗೆರೆ : ಜಾತಿ ಭೇದ, ಲಿಂಗ ತಾರತಮ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಅಂತರ್ಜಾತಿ ಹಾಗೂ ಸಾಮೂಹಿಕ ವಿವಾಹಗಳು ಪ್ರಮುಖವಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸೋಮವಾರ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರ 95ನೇ ಜನ್ಮದಿನದ ಅಂಗವಾಗಿ ದಾವಣಗೆರೆದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮಾತನಾಡಿದ ಅವರು, “ಬಸವಣ್ಣನವರೂ ಸೇರಿದಂತೆ ಶರಣ ಪರಂಪರೆ ಜಾತ್ಯತೀತ ಸಮಾಜದ ಕನಸು ಕಂಡಿತ್ತು. ಅದನ್ನು ಸಾಕಾರಗೊಳಿಸಲು ಸರ್ಕಾರ ಪ್ರತಿಬದ್ಧವಾಗಿದೆ” ಎಂದರು.
“ನಮ್ಮ ಸರ್ಕಾರ ಮಹಿಳೆಯರನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲಗೊಳಿಸುವ ನಿಟ್ಟಿನಲ್ಲಿ ವಿವಿಧ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಅಂತರ್ಜಾತಿ ವಿವಾಹಗಳು ಹೆಚ್ಚಾದರೆ ಸಮಾಜದಲ್ಲಿ ಜಾತಿ ತಾರತಮ್ಯ ,ಲಿಂಗ ತಾರತಮ್ಯ ನಿವಾರಣೆಯಾಗುತ್ತದೆ” ಎಂದು ತಿಳಿಸಿದರು.
ಇದೇ ವೇದಿಕೆಯಲ್ಲಿ ಶಾಮನೂರು ಶಿವಶಂಕರಪ್ಪರ ಕುರಿತು ಮಾತನಾಡಿದ ಸಿಎಂ, “ಅವರ ಆರೋಗ್ಯ ಉತ್ತಮವಾಗಿದೆ. ಇಂತಹ ಶಕ್ತಿಯುತ ನಾಯಕರು ಇನ್ನೊಂದು ಚುನಾವಣೆಗೆ ಸಹ ಸ್ಪರ್ಧಿಸಬಹುದಾದಷ್ಟು ಚೈತನ್ಯದಿಂದಿದ್ದಾರೆ. ಅವರು ಆಸಕ್ತಿ ತೋರಿಸಿದರೆ ಕಾಂಗ್ರೆಸ್ ಮತ್ತೆ ಟಿಕೆಟ್ ನೀಡಲು ಸಿದ್ಧ” ಎಂದು ಹೇಳಿದರು.