
ಇಂದೋರ್: ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಕಪ್ಪು ಚುಕ್ಕೆಯಂತಿರುವ ಇಂದೋರ್ನ ತೇಜಾಜಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಅತಿ ವೇಗವಾಗಿ ಬಂದ ಟ್ರಕ್ ಹಾಗೂ ಕಾರಿನ ನಡುವೆ ನಡೆದ ಈ ಭೀಕರ ಮುಖಾಮುಖಿ ಸಂಘರ್ಷದಲ್ಲಿ ರಾಜ್ಯದ ಮಾಜಿ ಗೃಹ ಸಚಿವ ಹಾಗೂ ಪ್ರಭಾವಿ ಕಾಂಗ್ರೆಸ್ ನಾಯಕ ಬಾಲಾ ಬಚ್ಚನ್ ಅವರ ಪುತ್ರಿ ಸೇರಿದಂತೆ 3 ಮಂದಿ ಉಸಿರು ಚೆಲ್ಲಿದ್ದಾರೆ.
ಜ. 9ರ ಶುಕ್ರವಾರ ಮುಂಜಾನೆ ಈ ಅಪಘಾತ ನಡೆದಿದ್ದು, ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರಲ್ಲಿ ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತರಲ್ಲಿ ಶಾಸಕ ಬಾಲಾ ಬಚ್ಚನ್ ಅವರ ಪುತ್ರಿ ಪ್ರೇರಣ ಬಚ್ಚನ್ ಅವರೊಂದಿಗೆ ಮಾನ್ ಸಂಧು ಹಾಗೂ ಪ್ರಖರ್ ಎಂಬ ಇಬ್ಬರು ಯುವತಿಯರು ಉಸಿರು ಚೆಲ್ಲಿದ್ದಾರೆ. ಮತ್ತೊಬ್ಬ ಯುವತಿ ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಆಕೆಯನ್ನು ತಕ್ಷಣವೇ ಇಂದೋರ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಘರ್ಷಣೆಯ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು ಮತ್ತು ಸ್ಥಳೀಯರು ಹರಸಾಹಸ ಪಡಬೇಕಾಯಿತು. ಅಪಘಾತಕ್ಕೆ ಕಾರಣವಾದ ಟ್ರಕ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಅತಿ ವೇಗ ಅಥವಾ ಚಾಲಕನ ಅಜಾಗರೂಕತೆ ಈ ದುರಂತಕ್ಕೆ ಕಾರಣವಾಗಿರಬಹುದು ಎಂಬ ಶಂಕೆಯಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ತನಿಖಾ ತಂಡ ಪರಿಶೀಲಿಸುತ್ತಿದೆ.
ಈ ಸುದ್ದಿ ತಿಳಿಯುತ್ತಿದ್ದಂತೆಯೇ ಇಡೀ ರಾಜಕೀಯ ವಲಯದಲ್ಲಿ ಕಂಬನಿ ಮಡುಗಟ್ಟಿದೆ. ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಬಾಲಾ ಬಚ್ಚನ್ ಅವರಿಗೆ ಸಾಂತ್ವನ ಹೇಳಿದ್ದು, “ಇದು ಅತ್ಯಂತ ದುರದೃಷ್ಟಕರ ಮತ್ತು ಆಘಾತಕಾರಿ ಘಟನೆ” ಎಂದು ಸಂತಾಪ ಸೂಚಿಸಿದ್ದಾರೆ. ವಿರೋಧ ಪಕ್ಷದ ನಾಯಕ ಉಮಂಗ್ ಸಿಂಘಾರ್ ಸೇರಿದಂತೆ ಹಲವು ಗಣ್ಯರು ಪ್ರೇರಣ ಬಚ್ಚನ್ ಸಾವಿಗೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.



































