
ಹೆಬ್ರಿ : ಕುಚ್ಚೂರು ಹೆರ್ಗ ವಿಠ್ಠಲ ಶೆಟ್ಟಿ ಸರಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಸ್ನೇಹಲತಾ ಟಿ. ಜಿ. ಯವರು ಮುದ್ರಾಡಿಯ ಎಂ.ಎನ್. ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸರಕಾರ ಮತ್ತು ವಿವಿಧ ಸಂಘಗಳನ್ನು ದೀಪಬೆಳಗಿ ಉದ್ಘಾಟಿಸಿ “ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಪಾತ್ರವೂ ಮುಖ್ಯ. ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಾಗ ನಾವು ಬೆಳೆಯಲು ಸಾಧ್ಯ. ನಮ್ಮ ಪರೀಕ್ಷೆಗಳಲ್ಲಿ ಅಂಕ ಗಳಿಸಲೂ ಇದು ಸಹಕಾರಿ. ಉತ್ತಮ ಶಿಸ್ತು, ನಾಯಕತ್ವ ಗುಣ, ಸೇವಾ ಮನೋಭಾವ ಸಹಿತ ಆದರ್ಶ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಂಘಗಳ ಚಟುವಟಿಕೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನೂತನ ವಿದ್ಯಾರ್ಥಿ ನಾಯಕ ಮತ್ತು ಮಂತ್ರಿಮಂಡಲದ ಮಂತ್ರಿಗಳಿಗೆ ಮುಖ್ಯ ಶಿಕ್ಷಕರಾದ ಶ್ರೀ ಚಂದ್ರಶೇಖರ ಭಟ್ ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕಿ ಶ್ರೀಮತಿ ಶ್ಯಾಮಲಾ ಅವರು ವಿದ್ಯಾರ್ಥಿ ಸರಕಾರ, ಕನ್ನಡ ಸಾಹಿತ್ಯ ಸಂಘ, ಕಲ್ಪನಾ ಪರಿಸರ ಸಂಘ, ಆರೋಗ್ಯ ಸಂಘ, ವಿಜ್ಞಾನ ಸಂಘ, ನೇತಾಜಿ ಮತದಾರರ ಸಾಕ್ಷರತ ಸಂಘ, ವೃತ್ತಿ ಮಾರ್ಗದರ್ಶನ ಸಂಘಗಳ ಮೂಲಕ ನಡೆಸಲಾಗುವ ಕಾರ್ಯಚಟುವಟಿಕೆಗಳ ವಿವರವನ್ನು ವಾಚಿಸಿದರು.

ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಎನ್. ಎಂ. ಎಂ. ಎಸ್. ಪರೀಕ್ಷೆಯಲ್ಲಿ ಆಯ್ಕೆಯಾದ ಶೋಭಿತ್ ಯು. ಪೂಜಾರಿ ಹಾಗೂ ನಾಡಪ್ರಭು ಕೆಂಪೇಗೌಡ ಜಯಂತಿಯ ಪ್ರಯುಕ್ತ ಹೆಬ್ರಿ ತಾಲೂಕು ಆಡಳಿತ ನಡೆಸಿದ ಸ್ಪರ್ಧೆಯಲ್ಲಿ ಪ್ರಬಂಧದಲ್ಲಿ ಸಮಾಧಾನಕರ ಬಹುಮಾನ ಪಡೆದ ಪ್ರತೀಕ್ಷಾ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.ಹಾಗೂ ತಾಲೂಕು ಮಟ್ಟಕ್ಕೆ ಆಯ್ಕೆಯಾದ ಕಾರ್ತಿಕ್, ಅಂಜಲಿ, ಪ್ರತೀಕ್ ರವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಾಗರ ಎಜ್ಯುಕೇಶನ್ ಟ್ರಸ್ಟ್ (ರಿ) ನ ಕಾರ್ಯದರ್ಶಿಯವರಾದ ಶ್ರೀ ಅಶೋಕ ಕುಮಾರ್ ಶೆಟ್ಟಿ ವಹಿಸಿದ್ದರು. ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಸುರೇಶ್ ಕುಲಾಲ್, ವಿದ್ಯಾರ್ಥಿ ನಾಯಕ ಕಾರ್ತಿಕ್ ಉಪಸ್ಥಿತರಿದ್ದರು.
ಕನ್ನಡ ಅಧ್ಯಾಪಕ ಶ್ರೀ ಪಿ. ವಿ.ಆನಂದ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿ, ಮುಖ್ಯ ಶಿಕ್ಷಕ ಶ್ರೀ ಚಂದ್ರಶೇಖರ ಭಟ್ ಸ್ವಾಗತಿಸಿದರು. ಹಿರಿಯ ಶಿಕ್ಷಕ ಶ್ರೀ ಮಹೇಶ ನಾಯ್ಕ ಕೆ. ವಂದಿಸಿದರು. ವಿದ್ಯಾರ್ಥಿ ಸಂಘದ ಮಾರ್ಗದರ್ಶಿ ಶಿಕ್ಷಕ ಶ್ರೀ ರಘುಪತಿ ಹೆಬ್ಬಾರ್, ಶ್ರೀಮತಿ ಚಂದ್ರಕಾಂತಿ ಹೆಗ್ಡೆ, ಶ್ರೀ ಮಹೇಶ ಎಂ. ಸಹಕರಿಸಿದರು.