
ಕಾರ್ಕಳ : ಕಾರ್ಕಳ ಪುರಸಭಾ ವ್ಯಾಪ್ತಿಯ ರಸ್ತೆಗಳಲ್ಲಿ ಹೊಂಡಗಳೇ ತುಂಬಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ ಪುರಸಭಾ ಆಡಳಿತ ತಕ್ಷಣ ಎಲ್ಲಾ ಹೊಂಡಗಳನ್ನು ಮುಚ್ಚಬೇಕು ಇಲ್ಲವಾದರೆ ಸಾರ್ವಜನಿಕರ ಜೊತೆಗೂಡಿ ಮಾಡುವ ಪ್ರತಿಭಟನೆಯನ್ನು ಎದುರಿಸಬೇಕಾದಿತು ಎಂದು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜೇಂದ್ರ ದೇವಾಡಿಗ ಪುರಸಭೆಯನ್ನು ಎಚ್ಚರಿಸಿದ್ದಾರೆ.
ಪುರಸಭೆಯ ಪ್ರಮುಖ ರಸ್ತೆಗಳು ಹೊಂಡಗಳಿಂದ ತುಂಬಿದ್ದು ಈ ರಸ್ತೆಯಲ್ಲಿ ಸಂಚಾರ ಅಸಾಧ್ಯವಾಗಿದೆ. ಪ್ರತಿನಿತ್ಯ ದ್ವಿಚಕ್ರ ವಾಹನಗಳ ಅಪಘಾತಗಳಾಗಿ ಸವಾರರು ರಸ್ತೆಗೆ ಬಿದ್ದು ದೈಹಿಕ ಹಾನಿಗೊಳಗಾಗಿದ್ದಾರೆ. ಈ ಬಗ್ಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಪುರಸಭೆಯ ಈ ನಿರ್ಲಕ್ಷ ಧೋರಣೆ ಸರಿಯಲ್ಲ ಎಂದಿದ್ದಾರೆ.
ರಥಬೀದಿ ಮತ್ತು ಅನೇಕ ಕಡೆಗಳಲ್ಲಿ ಒಳಚರಂಡಿಯ ಮಲ ಮೂತ್ರದ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಅದನ್ನೇ ತುಳಿದು ದೇವಸ್ಥಾನಕ್ಕೆ ಹೋಗಬೇಕಾದ ಅನಿವಾರ್ಯತೆ ಭಕ್ತರಿಗಾಗಿದೆ, ಆದರೂ ಪುರಸಭೆಯ ಮೌನ ಆಶ್ಚರ್ಯ ತಂದಿದೆ. ತಕ್ಷಣ ಈ ಬಗ್ಗೆ ಗಮನ ಹರಿಸಿ ಸೂಕ್ತಕ್ರಮ ಜರುಗಿಸಬೇಕು , ಇಲ್ಲವಾದರೆ ಸಾರ್ವಜನಿಕರ ಜೊತೆಗೂಡಿ ಮಾಡುವ ಪ್ರತಿಭಟನೆ ಎದುರಿಸಬೇಕಾದೀತು ಎಂದು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜೇಂದ್ರ ದೇವಾಡಿಗರವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.