
ಹೆಬ್ರಿ: ಗಿಡಮರಗಳನ್ನು ನೆಡುವುದರಿಂದ ಜಾಗತಿಕ ತಾಪಮಾನವನ್ನು ಗಣನೀಯವಾಗಿ ತಗ್ಗಿಸಬಹುದು.ಜೊತೆಗೆ ಮಣ್ಣಿನ ಸವಕಳಿಯನ್ನು ತಡೆಗಟ್ಟಬಹುದು. ನೆಟ್ಟಿರುವ ಗಿಡಮರಗಳು ಶುದ್ಧ ಆಮ್ಲಜನಕವನ್ನು ಪ್ರಕೃತಿಗೆ ಬಿಡುಗಡೆ ಮಾಡುವುದರಿಂದ ಆರೋಗ್ಯ ಮಟ್ಟವನ್ನು ಸುಧಾರಿಸಿಕೊಳ್ಳಬಹುದು ಎಂದು ಸೀತಾನದಿ ಉಪವಲಯ ಅರಣ್ಯಾಧಿಕಾರಿ ಪ್ರದೀಪ್ ರವರು ಹೇಳಿದರು.

ಅವರು ಮುದ್ರಾಡಿ ಎಂ. ಎನ್.ಡಿ. ಎಸ್. ಎಂ.ಅನುದಾನಿತ ಪ್ರೌಢಶಾಲೆಯ ಕಲ್ಪನಾ ಪರಿಸರ ಸಂಘ ಮತ್ತು ಹೆಬ್ರಿ ಅರಣ್ಯ ಇಲಾಖೆಯ ಜಂಟಿ ಸಹಯೋಗದಲ್ಲಿ ನಡೆದ “ಇಳೆಗೈಸಿರಿ” ವನಮಹೋತ್ಸವ ಕಾರ್ಯಕ್ರಮದಲ್ಲಿ ಪ್ರತಿ ಮಗುವಿನ ಮನೆಗೊಂದು ಗಿಡವನ್ನು ವಿತರಿಸಿ ಮಾತನಾಡಿದರು. ಗಿಡ ಮರಗಳನ್ನು ಬೆಳೆಸುವ, ಅವುಗಳನ್ನು ಪಾಲಿಸುವ ಜೊತೆಗೆ ಪ್ರಕೃತಿಯನ್ನು ರಕ್ಷಿಸುವ ಗುರುತರವಾದ ಹೊಣೆಗಾರಿಕೆ ಇಂದಿನ ಯುವ ಪೀಳಿಗೆಯದ್ದಾಗಿದ್ದು ಅದಕ್ಕಾಗಿ ಎಲ್ಲರೂ ಕಟಿಬದ್ಧರಾಗಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಾಗರ್ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿಯಾದ ಅಶೋಕ್ ಕುಮಾರ್ ಶೆಟ್ಟಿ ವಹಿಸಿದ್ದರು. ಮುದ್ರಾಡಿ ವಲಯದ ಗಸ್ತು ಅರಣ್ಯ ಪಾಲಕರಾಗಿರುವ ದೇವಾನಂದ್, ಕಲ್ಪನಾ ಪರಿಸರ ಸಂಘದ ಅಧ್ಯಕ್ಷ ಶೋಭಿತ್ ಯು. ಪೂಜಾರಿ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಪರಿಸರ ಸಂಘದ ಮಾರ್ಗದರ್ಶಿ ಶಿಕ್ಷಕಿ ಶ್ಯಾಮಲಾ ಕೊಠಾರಿ ಕಾರ್ಯಕ್ರಮ ನಿರೂಪಿಸಿ, ಮಹೇಶ್ ನಾಯ್ಕ್ ಕೆ. ವಂದಿಸಿದರು. ಶಿಕ್ಷಕರಾದ ರಘುಪತಿ ಹೆಬ್ಬಾರ್, ಚಂದ್ರಕಾಂತಿ ಹೆಗ್ಡೆ, ಶಿಕ್ಷಕೇತರ ಸಿಬ್ಬಂದಿ ಮಹೇಶ ಎಂ., ಶಾಲಾ ವಿದ್ಯಾರ್ಥಿ ನಾಯಕ ಕಾರ್ತಿಕ್ ಸಹಕರಿಸಿದರು.