
ಧಾರವಾಡ: ಯೂಟ್ಯೂಬ್ ಖ್ಯಾತಿಯ ಖ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ಮತ್ತು ಗಾಯತ್ರಿ ಜಾಲಿಹಾಳ ಅವರ ವಿವಾಹಕ್ಕೆ ಸಂಬಂಧಿಸಿದಂತೆ ವ್ಯಕ್ತವಾದ ವ್ಯಾಪಕ ವಿರೋಧ ಮತ್ತು ‘ಲವ್ ಜಿಹಾದ್’ ಆರೋಪಗಳ ಕುರಿತು ದಂಪತಿ ಜಂಟಿಯಾಗಿ ವಿಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ.
ವಿಡಿಯೋದಲ್ಲಿ ಮಾತನಾಡಿದ ಮುಕಳೆಪ್ಪ, “ನಾನು ಗಾಯತ್ರಿಯನ್ನು ಮತಾಂತರ ಮಾಡಿಲ್ಲ, ಮಾಡುವುದಿಲ್ಲ. ಆಕೆ ಯಾವ ಧರ್ಮದಲ್ಲಿ ಇರುತ್ತಿದ್ದಳೋ, ಅದೇ ಧರ್ಮದಲ್ಲಿ ಮುಂದುವರಿಯಲಿದ್ದಾಳೆ. ನಾವು ಪರಸ್ಪರ ಇಷ್ಟಪಟ್ಟು ಮದುವೆಯಾಗಿದ್ದೇವೆ. ಕಲಾವಿದರಿಗೆ ಜಾತಿ, ಧರ್ಮ ಇರುವುದಿಲ್ಲ. ದಯವಿಟ್ಟು ನಮ್ಮನ್ನು ಬದುಕಲು ಬಿಡಿ, ನಮಗೆ ರಕ್ಷಣೆ ಕೊಡಿ” ಎಂದು ಕೈಮುಗಿದು ವಿನಂತಿಸಿಕೊಂಡಿದ್ದಾರೆ. ಗಾಯತ್ರಿ ಕೂಡ ಇದೇ ಮಾತನ್ನು ಹೇಳಿ ಮನವಿ ಮಾಡಿದ್ದಾರೆ.
ನ್ಯಾಯಾಲಯದಲ್ಲಿ ಗಾಯತ್ರಿಯ ಹೇಳಿಕೆ
ಪೊಲೀಸ್ ಭದ್ರತೆಯೊಂದಿಗೆ ಧಾರವಾಡದ ಜೆಎಂಎಫ್ ನ್ಯಾಯಾಲಯಕ್ಕೆ ಹಾಜರಾದ ಗಾಯತ್ರಿ ಜಾಲಿಹಾಳ, ಸ್ವಇಚ್ಛೆಯಿಂದ ಖ್ವಾಜಾರನ್ನು ಮದುವೆಯಾಗಿರುವುದಾಗಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾರೆ. “ನನ್ನ ಗಂಡ ಯಾರ ಜೀವಕ್ಕೂ ಬೆದರಿಕೆ ಹಾಕಿಲ್ಲ. ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ನಾವು ಮದುವೆ ನಂತರವೂ ನಮ್ಮ ತಂದೆ-ತಾಯಿಯೊಂದಿಗೆ ಅನ್ಯೋನ್ಯವಾಗಿದ್ದೆವು. ನನಗೆ ಮತ್ತು ನನ್ನ ಗಂಡನಿಗೆ ಜೀವ ಬೆದರಿಕೆ ಇದೆ, ನಮಗೆ ರಕ್ಷಣೆ ಕೊಡಿ” ಎಂದು ಮನವಿ ಮಾಡಿದ್ದಾರೆ.
ಈ ಮಧ್ಯೆ, ತಮ್ಮ ಮಗಳನ್ನು ಭೇಟಿ ಮಾಡಲು ಬಂದ ಪೋಷಕರಾದ ಯಲ್ಲಪ್ಪ ಮತ್ತು ಶಿವಕ್ಕ ಅವರೊಂದಿಗೆ ಗಾಯತ್ರಿ ಮಾತನಾಡಲು ನಿರಾಕರಿಸಿದ್ದಾರೆ. ಇದರಿಂದ ಭಾವುಕರಾದ ಪೋಷಕರು, ಮುಕಳೆಪ್ಪ ತನ್ನ ಮಗಳ ತಲೆ ಕೆಡಿಸಿದ್ದಾನೆ ಎಂದು ಆರೋಪಿಸಿದ್ದಾರೆ. “ನನ್ನ ಮಗಳು ನಮ್ಮೊಂದಿಗೆ ಬರುತ್ತಿಲ್ಲ, ಆಕೆಯ ತಲೆ ಸರಿ ಹೋಗುವವರೆಗೂ ನಾವು ಆಕೆಯ ಬೆನ್ನತ್ತುತ್ತೇವೆ” ಎಂದು ಕಣ್ಣೀರಿಟ್ಟಿದ್ದಾರೆ. “ನನಗೆ ಯಾರು ಹೆದರಿಸಿಲ್ಲ, ಯಾರದೋ ಮಾತು ಕೇಳಿ ನಾನು ದೂರು ಕೊಟ್ಟಿಲ್ಲ, ಮುಕಳೆಪ್ಪ ನಮಗೆ ಮೋಸ ಮಾಡಿದ್ದಾನೆ” ಎಂದು ತಾಯಿ ಶಿವಕ್ಕ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.



































