
ಉಡುಪಿ : ಉಡುಪಿ ಜಿಲ್ಲೆಯ ಶಂಕರನಾರಾಯಣ ಬಳಿಯ ಹಿಲಿಯಾಣ ಗ್ರಾಮದ ಹೊಸಮಠದಲ್ಲಿ ಜೂನ್ 19ರ ರಾತ್ರಿ ನಡೆದ ಭೀಕರ ಘಟನೆಯಲ್ಲಿ ಗಂಡನೇ ತನ್ನ ಪತ್ನಿಯನ್ನು ಮನೆಯೊಳಗೆ ಕತ್ತಿಯಿಂದ ಕಡಿದು ಕೊಂದಿರುವ ಅಮಾನುಷ ಪ್ರಕರಣ ಬೆಳಕಿಗೆ ಬಂದಿದೆ.
27 ವರ್ಷದ ರೇಖಾ ಎಂಬ ಮಹಿಳೆಯು ಹತ್ಯೆಗೊಳಗಾಗಿದ್ದು, ಆರೋಪಿ ಗಂಡ ಗಣೇಶ ಪೂಜಾರಿ ಮದ್ಯಪಾನ ಚಟವನ್ನು ಹೊಂದಿದ್ದು , ಈ ಹಿಂದೆ ಕೂಡ ಪತ್ನಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಮಾಹಿತಿಗಳು ಲಭ್ಯವಾಗಿವೆ.
ಹತ್ಯೆಯ ದಿನ ರಾತ್ರಿ 11:30ರ ವೇಳೆಗೆ, ರೇಖಾ ಕೆಲಸ ಮುಗಿಸಿ ಮನೆಗೆ ಬಂದ ನಂತರ ಮನೆಯೊಳಗೆ ಹೋದ ಗಣೇಶ್, ಬಾಗಿಲು ಲಾಕ್ ಮಾಡಿ ರೇಖಾ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಇದನ್ನು ಕುಟುಂಬಸ್ಥರು ಕಿಟಕಿಯಿಂದ ನೋಡಿ ಸಾಕಷ್ಟು ಕೇಳಿಕೊಂಡರೂ ಆರೋಪಿ ಕೇಳದೆ ರೇಖಾರನ್ನು ಮಾರಕವಾಗಿ ಇರಿದು ಕೊಂದಿದ್ದಾನೆ. ನಂತರ ಹೊರಗೆ ಬಂದು “ಪೊಲೀಸರಿಗೆ ಹೇಳಿದರೆ ನಿಮ್ಮನ್ನೂ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ.

ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ BNS ಕಲಂ 103 ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ತನಿಖೆ ಆರಂಭವಾಗಿದೆ.
ಸ್ಥಳೀಯರು ಈ ಕ್ರೂರ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದು, ತಾಯಿ ರೇಖಾರ ಮರಣದಿಂದ ಮಕ್ಕಳಿಬ್ಬರು ಅನಾಥರಾಗಿದ್ದಾರೆ ಎಂದು ವಿಷಾದ ವ್ಯಕ್ತ ಪಡಿಸಿದ್ದಾರೆ.