

ಕೇರಳದ ತಿರುವನಂತಪುರಂ ಜಿಲ್ಲೆಯ ವೆಂಜರಮೂಡು ಪ್ರದೇಶದಲ್ಲಿ 23 ವರ್ಷದ ಯುವಕನೊಬ್ಬ ತನ್ನ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು ಐವರು ಸದಸ್ಯರನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ. ಈ ಕೃತ್ಯ ಎಸಗಿ ತಾನೂ ವಿಷ ಸೇವಿಸಿದ್ದ ಆರೋಪಿ, ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಎಲ್ಲವನ್ನೂ ವಿವರಿಸಿದ್ದಾನೆ.
ಹತ್ಯೆ ಮಾಡಿದ ಆರೋಪಿಯನ್ನು ಅಫ್ಘಾನ್ (23) ಎಂದು ಗುರುತಿಸಲಾಗಿದೆ. ಆತ ಮೊದಲಿಗೆ ತನ್ನ ಅಜ್ಜಿ ಸಲ್ಮಾ ಬೀವಿಯ ಮನೆಗೆ ತೆರಳಿ, ಅವರ ಒಡವೆಗಳನ್ನು ನೀಡುವಂತೆ ಕೇಳಿದ್ದ. ಆದರೆ ಅವರು ಒಪ್ಪದೇ ಹೋದಾಗ, ಕೋಪಗೊಂಡು ಆಕೆಯನ್ನು ಹತ್ಯೆಗೈದಿದ್ದಾನೆ. ಬಳಿಕ ಚಿಕ್ಕಪ್ಪ ಲತೀಫ್ ಹಾಗೂ ಚಿಕ್ಕಮ್ಮ ಶಾಹಿದಾ ಮನೆಗೆ ತೆರಳಿ, ಸಾಲ ತೀರಿಸಲು ಹಣ ಕೇಳಿದ್ದಾನೆ. ಆದರೆ ಅಲ್ಲಿ ಸಹ ಸಹಾಯ ಸಿಗದೆ ಹೋದಾಗ, ಸುತ್ತಿಗೆಯಿಂದ ಹೊಡೆದು ಅವರನ್ನು ಕೊಂದಿದ್ದಾನೆ. ಇದಾದ ಬಳಿಕ ತನ್ನ ಮನೆಯತ್ತ ಮುಖ ಮಾಡಿ, ಸಹೋದರ ಅಕ್ಸಾನ್ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ. ತಾಯಿ ಶೆಮಿಯ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತಾಯಿಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತಿರುವನಂತಪುರಂನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈತ ಕೇವಲ ಕುಟುಂಬದವರನ್ನಷ್ಟೇ ಅಲ್ಲ, ತನ್ನ ಗೆಳತಿ ಫರ್ಶಾನಾರನ್ನೂ ಮನೆಗೆ ಕರಸಿ, ಹತ್ಯೆಗೈದು ಕೊನೆಗೆ ತಾನೂ ವಿಷ ಸೇವಿಸಿದ್ದಾನೆ. ಎಲ್ಲರನ್ನು ಹತ್ಯೆ ಮಾಡಿದ ಬಳಿಕ ನೇರವಾಗಿ ರಿಕ್ಷಾ ಮೂಲಕ ಪೊಲೀಸ್ ಠಾಣೆಗೆ ಬಂದು ತಾನೇ ಈ ಕೃತ್ಯ ಎಸಗಿರುವುದಾಗಿ ಪೊಲೀಸರಿಗೆ ಹೇಳಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು, ಈ ಕೃತ್ಯದ ಹಿಂದಿನ ನಿಜವಾದ ಕಾರಣ ಅನ್ವೇಷಣೆ ಮಾಡುತ್ತಿದ್ದಾರೆ.
ಆರೋಪಿ ಅಫ್ಘಾನ್ ತನ್ನ ವ್ಯಾಪಾರದಲ್ಲಿ ಭಾರೀ ನಷ್ಟ ಅನುಭವಿಸಿದ್ದನು. ಅದನ್ನು ಭರಿಸಲು ಮನೆಯವರ ಸಹಾಯ ಕೇಳಿದಾಗ ಯಾರೂ ಮುಂದೆ ಬರಲಿಲ್ಲ. ಇದರಿಂದ ಕೋಪಗೊಂಡು ಈ ಕೃತ್ಯ ಎಸಗಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ. ಆದರೆ ಪೊಲೀಸರು ಆತನ ಹೇಳಿಕೆಯಲ್ಲಿ ಅನುಮಾನ ವ್ಯಕ್ತಪಡಿಸಿದ್ದು, ಆರೋಗ್ಯ ಸುಧಾರಿಸಿದ ಬಳಿಕ ಆತನನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಲು ತೀರ್ಮಾನಿಸಿದ್ದಾರೆ.
ಈ ಹತ್ಯಾಕಾಂಡ ತಿರುವನಂತಪುರಂನಲ್ಲೇ ಅಲ್ಲದೆ, ರಾಜ್ಯದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಆರೋಪಿ ತನ್ನ ಮನೆಯಲ್ಲಿ, ಅಜ್ಜಿಯ ಮನೆಯಲ್ಲಿ ಮತ್ತು ಚಿಕ್ಕಪ್ಪನ ಮನೆಯಲ್ಲಿ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಹತ್ಯೆಗೈದಿದ್ದಾನೆ. ಕುಟುಂಬದ ಸದಸ್ಯರೇ ಹತ್ತಿರವಿದ್ದರೂ ಸಹಾಯಕ್ಕೆ ಬರಲಿಲ್ಲ ಎಂಬ ಆಕ್ರೋಶದಲ್ಲೇ ಈ ದುರ್ಘಟನೆ ನಡೆದಿದೆಯಾ ಅಥವಾ ಬೇರೆ ಕಾರಣವಿದೆಯಾ ಎಂಬ ಬಗ್ಗೆ ಪೊಲೀಸರು ಆಳವಾದ ತನಿಖೆ ನಡೆಸುತ್ತಿದ್ದಾರೆ.