
ಯಾದಗಿರಿ: ರಾಜ್ಯದಲ್ಲಿ ಹನಿಟ್ರ್ಯಾಪ್ ಪ್ರಕರಣಗಳು ಹೆಚ್ಚುತ್ತಿದ್ದು, ಇದು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಮಾಜಿ ಸಚಿವ ಬಿ. ಶ್ರೀರಾಮುಲು ಆತಂಕ ವ್ಯಕ್ತಪಡಿಸಿದ್ದು, “ಹನಿಟ್ರ್ಯಾಪ್ ರಾಜ್ಯದ ರಾಜಕೀಯದಲ್ಲಿ ಒಂದು ಕೆಟ್ಟ ಟ್ರೆಂಡ್ ಆಗುತ್ತಿದೆ. ಜನಪ್ರತಿನಿಧಿಗಳ ವಿಶ್ವಾಸಾ ರ್ಹತೆ ಉಳಿಸಲು ಸಿಬಿಐ ತನಿಖೆ ಅಗತ್ಯ” ಎಂದು ಹೇಳಿದ್ದಾರೆ.
ಯಾದಗಿರಿಯ ಮಹಲ್ ರೋಜಾದಲ್ಲಿ ಮಾತನಾಡಿದ ಶ್ರೀರಾಮುಲು, “ಈ ಪ್ರಕರಣದಿಂದ ರಾಜ್ಯದ ಜನರಿಗೇ ಅಸಹ್ಯವಾಗುತ್ತಿದೆ. ಇದು ಯಾವುದೇ ಪಕ್ಷದವರ ವಿಚಾರವಲ್ಲ, ರಾಜಕಾರಣಿಗಳ ಮೇಲೆ ಸಾರ್ವಜನಿಕರು ಇಟ್ಟ ವಿಶ್ವಾಸ ಹಾಳಾಗದಂತೆ ನೋಡಿಕೊಳ್ಳಬೇಕು. ಹನಿಟ್ರ್ಯಾಪ್ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಿದರೆ, ಇದರ ಹಿಂದೆ ಯಾರಿದ್ದಾರೆ ಎಂಬುದು ಬಹಿರಂಗವಾಗುತ್ತದೆ” ಎಂದು ತಿಳಿಸಿದ್ದಾರೆ.
ಅರವಿಂದ ಲಿಂಬಾವಳಿ, ರಮೇಶ ಜಾರಕಿಹೊಳಿ ಮತ್ತು ಪ್ರಸ್ತುತ ಸಚಿವ ರಾಜಣ್ಣ ಅವರ ಹೆಸರು ಈ ಪ್ರಕರಣದಲ್ಲಿ ಕೇಳಿ ಬರುತ್ತಿರುವುದಾಗಿ ಅವರು ಹೇಳಿದ್ದಾರೆ. “ಇದು ಯಾರ ಆಟ? ಯಾರು ಡೈರೆಕ್ಟರ್, ಯಾರು ಪ್ರೊಡ್ಯೂಸರ್? ಹನಿಟ್ರ್ಯಾಪ್ ಫ್ಯಾಕ್ಟರಿಯನ್ನು ನಡೆಸುತ್ತಿರುವವರು ಯಾರು ಎಂಬುದು ಬಹಿರಂಗವಾಗಬೇಕಾದರೆ, ತಪ್ಪದೇ ಸಿಬಿಐ ತನಿಖೆ ನಡೆಯಬೇಕು” ಎಂದು ಶ್ರೀರಾಮುಲು ಒತ್ತಿಹೇಳಿದರು.