
ಹಿರಿಯಡ್ಕ : ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ನ ಸಮುದಾಯ ಆರೋಗ್ಯ ನರ್ಸಿಂಗ್ ವಿಭಾಗ ಹಾಗೂ 5ನೇ ಸೆಮಿಸ್ಟರ್ ಬಿ.ಎಸ್.ಸಿ. ನರ್ಸಿಂಗ್ ವಿದ್ಯಾರ್ಥಿಗಳು ಇಂದು ಕರ್ನಾಟಕ ಪಬ್ಲಿಕ್ ಶಾಲೆ (ಸರ್ಕಾರಿ ಪಿಯು ಕಾಲೇಜು), ಹಿರಿಯಡ್ಕದಲ್ಲಿ ‘ಶಾಲಾ ಆರೋಗ್ಯ ಕಾರ್ಯಕ್ರಮ’ದ ಅಂಗವಾಗಿ HIV/AIDS ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಕಾರ್ಯಕ್ರಮದ ಉದ್ದೇಶ ಮತ್ತು ಸಂದೇಶ
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಕ್ಲಾರಾ ಡಿಸೋಜ ಮಾತನಾಡಿ, ವಿದ್ಯಾರ್ಥಿಗಳಲ್ಲಿ HIV/AIDS ಬಗ್ಗೆ ಅರಿವು ಮೂಡಿಸುವುದು, ಅದರ ತಡೆಗಟ್ಟುವಿಕೆ, ಮೂಢನಂಬಿಕೆ ನಿವಾರಣೆ ಮತ್ತು ಆರೋಗ್ಯ ಜಾಗೃತಿ ಹೆಚ್ಚಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಶ್ರೀ ಮಂಜುನಾಥ ಭಟ್ ಅವರು, ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಮೂಲಕ ಆರೋಗ್ಯದ ಬಗ್ಗೆ ತಿಳುವಳಿಕೆ ಪಡೆದು, ಹದಿಹರೆಯದ ವಯಸ್ಸಿನಲ್ಲಿ ಜಾಗೃತಿಯಿಂದ ತಮ್ಮ ಹೊಣೆಗಾರಿಕೆ ಅರಿತು ವರ್ತಿಸುವಂತೆ ಕಿವಿಮಾತು ಹೇಳಿದರು. ಚಿತ್ರಕಲೆ ಶಿಕ್ಷಕ ಶ್ರೀ ಮೋಹನ್ ಕಡಬ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜಾಗೃತಿ ಚಟುವಟಿಕೆಗಳು
ನರ್ಸಿಂಗ್ ವಿದ್ಯಾರ್ಥಿಗಳು ಮನಮುಟ್ಟುವ ರೀತಿಯಲ್ಲಿ AIDS ಜಾಗೃತಿ ನಾಟಕವನ್ನು ಪ್ರದರ್ಶಿಸಿ, HIV/AIDS ಕುರಿತು ಕ್ವಿಜ್ ಸ್ಪರ್ಧೆಯನ್ನೂ ಸಹ ಆಯೋಜಿಸಿದರು ಮತ್ತು ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿ ಪ್ರತಿನಿಧಿ ಎಲ್ಸಾ ಮಾರಿಯಾ ಸ್ವಾಗತಿಸಿದರು, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಶ್ರೀ ದೇವದಾಸ್ ಡಿ. ಪ್ರಭು ವಂದಿಸಿದರು ಹಾಗೂ ವಿದ್ಯಾರ್ಥಿ ಪ್ರತಿನಿಧಿ ಯಶೋಧಾ ಅವರು ಕಾರ್ಯಕ್ರಮ ನಿರೂಪಿಸಿದರು.




































