
ಹಿರಿಯಡ್ಕ: ಪುತ್ತಿಗೆ ಮೂಲಮಠದ ಆಡಳಿತಕ್ಕೆ ಒಳಪಟ್ಟಿರುವ ಬೊಮ್ಮರಬೆಟ್ಟು ಗ್ರಾಮದ ಆರಾಧ್ಯ ದೈವ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿವೆ. ಪುತ್ತಿಗೆ ಮಠದ ಹಿರಿಯ ಯತಿಗಳಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀಗಳಾದ ಶ್ರೀ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ ಈ ಪವಿತ್ರ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ಕ್ಷೇತ್ರದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯ ವಿಧಿವಿಧಾನಗಳ ಅನ್ವಯ, ಜೀರ್ಣೋದ್ಧಾರ ಪ್ರಕ್ರಿಯೆಯ ಪ್ರಾಯಶ್ಚಿತ್ತ ರೂಪವಾಗಿ ಈಗಾಗಲೇ ‘ಮುಷ್ಟಿ ಕಾಣಿಕೆ’ ಸಮರ್ಪಣಾ ಸೇವೆಯು ಯಶಸ್ವಿಯಾಗಿ ನೆರವೇರಿದೆ. ಇದರ ಮುಂದುವರಿದ ಭಾಗವಾಗಿ ದೇವಸ್ಥಾನದ ಆವರಣದಲ್ಲಿ ಭಕ್ತಿಭಾವದ ಪರಾಕಾಷ್ಠೆಯಾಗಿ ‘ಅಖಂಡ ಏಕಾಹ ಭಜನೆ’ ಎಂಬ ವಿಶೇಷ ಪುಣ್ಯ ನಾಮ ಸಂಕೀರ್ತನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ದಿನಾಂಕ 3/2/2026ರ ಮಂಗಳವಾರ ಬೆಳಿಗ್ಗೆ 6.00 ಗಂಟೆಗೆ ಚಾಲನೆ ಪಡೆಯಲಿರುವ ಈ ಅಖಂಡ ಭಜನೆಯು, ಸತತ 24 ಗಂಟೆಗಳ ಕಾಲ ಅಹೋರಾತ್ರಿ ನಡೆದು ಮರುದಿನ ಬೆಳಿಗ್ಗೆ 6.00 ಗಂಟೆಗೆ ಮಂಗಳ ಹಾಡಲಿದೆ. ಈ ದಿವ್ಯ ಸಂಕೀರ್ತನೆಯಲ್ಲಿ ಹಿರಿಯಡ್ಕ, ಪುತ್ತಿಗೆ, ಮಣಿಪಾಲ, ಆತ್ರಾಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸುಮಾರು 26ಕ್ಕೂ ಹೆಚ್ಚು ಪ್ರಸಿದ್ಧ ಭಜನಾ ಮಂಡಳಿಗಳು ಪಾಲ್ಗೊಂಡು ಹರಿನಾಮ ಸ್ಮರಣೆ ಮಾಡಲಿವೆ. ಭಜನಾ ಸೇವೆಯಲ್ಲಿ ಭಾಗವಹಿಸುವ ಭಕ್ತಾದಿಗಳಿಗೆ ಮತ್ತು ಸಾರ್ವಜನಿಕರಿಗೆ ಈ ಮೂಲಕ ಶ್ರೀ ವಿಷ್ಣುಮೂರ್ತಿ ದೇವರ ಕೃಪೆಗೆ ಪಾತ್ರರಾಗಲು ಸಮಿತಿಯು ಆಹ್ವಾನ ನೀಡಿದೆ.



































