
ಬೆಂಗಳೂರು: ಇಂದು ಹೈಕೋರ್ಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಮುಡಾ ನಿವೇಶನ ಹಂಚಿಕೆ ಹಗರಣ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ ಕುರಿತು ತೀರ್ಪು ಪ್ರಕಟಿಸಲಿದ್ದು, ಕರ್ನಾಟಕ ರಾಜಕೀಯದ ಭವಿಷ್ಯಕ್ಕೆ ಮಹತ್ವದ ಬೆಳವಣಿಗೆಯಾಗಲಿದೆ. ಬೆಳಗ್ಗೆ 10.30ಕ್ಕೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ಧಾರ ಪ್ರಕಟಿಸಲಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ, ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ ಅರ್ಜಿಯಲ್ಲಿ, ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರು ಮೈಸೂರಿನ ಕೆಸರೆ ಗ್ರಾಮದಲ್ಲಿದ್ದ ಮೂರು ಎಕರೆ 16 ಗುಂಟೆ ಜಮೀನಿಗೆ ಬದಲಾಗಿ 56 ಕೋಟಿ ಮೌಲ್ಯದ 14 ನಿವೇಶನಗಳನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಈ ಹಗರಣದಲ್ಲಿ ಸಿದ್ದರಾಮಯ್ಯ ಅವರು ಅಧಿಕಾರ ದುರುಪಯೋಗ ಮಾಡಿದ್ದು, ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ ಎಂಬುದಾಗಿ ದೂರು ನೀಡಲಾಗಿದೆ. ಈ ಸಂಬಂಧ ರಾಜ್ಯಪಾಲರು 2024ರ ಆಗಸ್ಟ್ 17ರಂದು ತನಿಖೆ ಹಾಗೂ ಅಭಿಯೋಜನೆಗೆ ಅನುಮತಿ ನೀಡಿದ್ದರು. ಆದರೆ ಅದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದರು. ಆ ಅರ್ಜಿಯನ್ನು ನ್ಯಾಯಾಲಯ ಸೆಪ್ಟೆಂಬರ್ 24ರಂದು ವಜಾಗೊಳಿಸಿ, ಪ್ರಕರಣದ ತನಿಖೆ ಅತ್ಯಗತ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.
ಇದೀಗ ಹೈಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕಾ ಅಥವಾ ಇಲ್ಲವಾ ಎಂಬ ಕುರಿತು ತೀರ್ಪು ನೀಡಲಿದ್ದು, ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯ ದಿಕ್ಕು ತೀರ್ಮಾನವಾಗಲಿದೆ. ತೀರ್ಪು ಅವರ ವಿರುದ್ಧ ಬಂದರೆ, ಸಿಬಿಐ ತನಿಖೆಯ ಒತ್ತಡ ಅವರ ಮೇಲೆ ಬಿದ್ದಂತಾಗುತ್ತದೆ. ಇದರೊಂದಿಗೆ, ಈಗಾಗಲೇ ಜಾರಿ ನಿರ್ದೇಶನಾಲಯ (ED) ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವುದರಿಂದ, ಅವರ ಕಾನೂನು ಹೋರಾಟ ಇನ್ನಷ್ಟು ಕಠಿಣವಾಗಬಹುದು. ಹೀಗಾಗಿ, ಈ ತೀರ್ಪು ಅವರ ಪರವಾಗುವುದಾ ಅಥವಾ ಅವರ ವಿರುದ್ಧವಾಗುವುದಾ ಎಂಬ ಪ್ರಶ್ನೆ ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಇದೇ ದಿನ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ಕೂಡಾ ಹೊರಬರುವ ನಿರೀಕ್ಷೆಯಿದೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ 2024ರ ಮಾರ್ಚ್ 14ರಂದು ಪೋಕ್ಸೋ ಕಾಯ್ದೆಯಡಿ ಅವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇದನ್ನು ಪ್ರಶ್ನಿಸಿ ಯಡಿಯೂರಪ್ಪ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ 2024ರ ಜೂನ್ 14ರಂದು ತನಿಖೆಗೆ ತಡೆ ನೀಡಲು ನಿರಾಕರಿಸಿದರೂ, ಅವರನ್ನು ಬಂಧಿಸಬಾರದು ಎಂಬ ಆದೇಶವನ್ನು ನೀಡಿತ್ತು.
ಇಂದು ಹೈಕೋರ್ಟ್ ಅವರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ ಎಫ್ಐಆರ್ ರದ್ದು ಮಾಡುತ್ತದೆಯೇ ಅಥವಾ ತನಿಖೆ ಮುಂದುವರಿಯಬೇಕೆಂಬ ತೀರ್ಪು ನೀಡುತ್ತದೆಯೇ ಎಂಬುದು ನಿರ್ಧಾರವಾಗಲಿದೆ. ಯಡಿಯೂರಪ್ಪ ಅವರ ಅರ್ಜಿ ತಿರಸ್ಕೃತವಾದರೆ, ಅವರನ್ನು ಬಂಧಿಸುವ ಭೀತಿ ಎದುರಾಗಬಹುದು. ಹೀಗಾಗಿ, ಈ ತೀರ್ಪು ಅವರ ರಾಜಕೀಯ ಬದುಕಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಕರ್ನಾಟಕದ ರಾಜಕೀಯ ವಾತಾವರಣವನ್ನು ತೀವ್ರವಾಗಿ ಪ್ರಭಾವಿತಗೊಳಿಸಬಹುದಾದ ಈ ತೀರ್ಪುಗಳ ನಿರೀಕ್ಷೆಯಲ್ಲಿ ರಾಜ್ಯದ ಜನತೆ ಹಾಗೂ ರಾಜಕೀಯ ವಲಯ ಕುತೂಹಲದಿಂದ ಕಾದಿದೆ.