
ಬೆಂಗಳೂರು : ಧರ್ಮಸ್ಥಳದ ಸುತ್ತಮುತ್ತ ಶವಗಳನ್ನು ಹೂತು ಹಾಕಿರುವ ಕುರಿತು ಅನಾಮಧೇಯ ಸಾಕ್ಷಿದಾರರು ಹೇಳಿಕೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಮೇಲೆ ವಿಧಿಸಲಾಗಿದ್ದ ಸುದ್ದಿ ಪ್ರಸಾರ ನಿರ್ಬಂಧವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿ ಮಹತ್ವದ ತೀರ್ಪು ನೀಡಿದೆ.
ಮಾಧ್ಯಮಗಳ ವಿರುದ್ಧದ ನಿರ್ಬಂಧ ರದ್ದು
ಈ ಪ್ರಕರಣದ ಕುರಿತು ಮಾಧ್ಯಮಗಳು ಸುದ್ದಿ ಪ್ರಕಟಿಸದಂತೆ ಡಿ. ಹರ್ಷೇಂದ್ರ ಕುಮಾರ್ ಅವರು ಈ ಹಿಂದೆ ಪ್ರತಿಬಂಧಕಾಜ್ಞೆಯನ್ನು ಪಡೆದುಕೊಂಡಿದ್ದರು. ಇದನ್ನು ಪ್ರಶ್ನಿಸಿ ಮಂಗಳೂರಿನ ಯೂಟ್ಯೂಬ್ ಚಾನೆಲ್ನ ಅಜಯ್ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಮಾಧ್ಯಮಗಳ ವಿರುದ್ಧದ ಪ್ರತಿಬಂಧಕಾಜ್ಞೆಯನ್ನು ರದ್ದುಪಡಿಸಿತು.
ಪ್ರಕರಣ ವಿಚಾರಣಾ ನ್ಯಾಯಾಲಯಕ್ಕೆ ವಾಪಸ್
ಹೈಕೋರ್ಟ್ ಕೇವಲ ನಿರ್ಬಂಧ ರದ್ದುಪಡಿಸುವುದಲ್ಲದೆ, ಪ್ರಕರಣವನ್ನು ಹೊಸದಾಗಿ ಪರಿಗಣಿಸಲು ಸಕ್ಷಮ ವಿಚಾರಣಾ ನ್ಯಾಯಾಲಯಕ್ಕೆ ಮರಳಿ ಕಳುಹಿಸಿದೆ. ಈ ಕುರಿತು ನ್ಯಾಯಾಲಯವು, “ವಿಚಾರಣಾ ನ್ಯಾಯಾಲಯವು ಮಧ್ಯಂತರ ಅರ್ಜಿಯನ್ನು ತುರ್ತಾಗಿ ನಿರ್ಧರಿಸಬೇಕು ಮತ್ತು ಹೈಕೋರ್ಟ್ನ ಈ ಆದೇಶದ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು” ಎಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಈ ತೀರ್ಪು ಮಾಧ್ಯಮ ಸ್ವಾತಂತ್ರ್ಯವನ್ನು ಎತ್ತಿಹಿಡಿದಿದೆ.