
ಹೆಬ್ರಿ : ನಾವು ಒಂದು ದೇವಸ್ಥಾನಕ್ಕೆ ತೆರಳಿದರೆ ಅಲ್ಲಿ ಇರುವ ದೇವರನ್ನು ಕಾಣಬಹುದು. ಆದರೆ ಗೋಶಾಲೆಯ ಒಂದೊಂದು ಗೋವುಗಳಲ್ಲಿ 33 ಕೋಟಿ ದೇವರ ಸನ್ನಿಧಾನ ಇದೆ. ನೂರಾರು ಗೋವುಗಳ ಮಧ್ಯೆ ಇದ್ದು ದೀಪೋತ್ಸವ ಆಚರಿಸಿದರೆ ಅನಂತ ಫಲ ನಮಗೆ ಸಿಗುವುದು. ಆದ್ದರಿಂದ ಗೋವುಗಳ ಆಂತರ್ಯಾಮಿ ಗೋಪಾಲಕೃಷ್ಣ ನಮ್ಮನ್ನೆಲ್ಲ ಅನುಗ್ರಹಿಸಲಿ ಎಂದು ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಅವರು ಗಿಲ್ಲಾಳಿ ವಿಶ್ವೇಶ್ವಕೃಷ್ಣ ಗೋಶಾಲೆಯಲ್ಲಿ ನಡೆದ ಕಾರ್ತಿಕ ಸಹಸ್ರ ದೀಪೋತ್ಸವದಲ್ಲಿ ಪಾಲ್ಗೊಂಡು ಶ್ರೀ ಕೃಷ್ಣನ ತೊಟ್ಟಿಲು ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ ಮುದ್ರಾಡಿ ಉಪ್ಪಳ ಕೀರ್ತಿಶೇಷ ಮರಿಯಪ್ಪ ಕಲ್ಕೂರ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಅವರ ಪತ್ನಿ ನಾಗವೇಣಿಯ ಸ್ಮರಣಾರ್ಥವಾಗಿ ಅವರ ಪುತ್ರ ಎಂ. ರಾಘವೇಂದ್ರ ಕಲ್ಕೂರ್ ಗಿಲ್ಲಾಳಿ ಗೋಶಾಲೆಗೆ 1 ಲಕ್ಷ ರೂ. ದೇಣಿಗೆಯ ಚೆಕ್ ನ್ನು ಸ್ವಾಮೀಜಿಯವರಿಗೆ ಹಸ್ತಾಂತರಿಸಿದರು.ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ರೆಂಜಾಳ ವಿದ್ವಾನ್ ಗುರುರಾಜ ಉಪಾಧ್ಯಾಯ ಹಾಗೂ ಅರ್ಚಕ ವೃಂದದವರು ನಡೆಸಿಕೊಟ್ಟರು.
ಗೋಶಾಲೆಯ ಟ್ರಸ್ಟಿಗಳಾದ ವಿಷ್ಣುಮೂರ್ತಿ ಆಚಾರ್ಯ, ಲಕ್ಷ್ಮಣ ಭಟ್, ವಿಷ್ಣುಮೂರ್ತಿ ನಾಯಕ್, ಶ್ರೀಕಾಂತ್ ಭಟ್ ಅಜೆಕಾರು ಹಾಗೂ ಸಮಸ್ತ ಗೋಭಕ್ತರು ಉಪಸ್ಥಿತರಿದ್ದರು.ಹೆಬ್ರಿ ನಿತ್ಯಾನಂದ ಭಟ್ ಮತ್ತು ಬಳಗದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಗಿಲ್ಲಾಳಿ ಅರ್ಧನಾರೀಶ್ವರ ಭಜನಾ ಮಂಡಳಿ ಹಾಗೂ ಸಮಸ್ತ ಗೊಭಕ್ತರ ನೆರವಿನಿಂದ ಕಾರ್ಯಕ್ರಮ ಸಂಪನ್ನಗೊಂಡಿತು. ವಿದ್ವಾನ್ ನಕ್ರೆ ರವಿಕುಮಾರ್ ಆಚಾರ್ಯ ಚಕ್ರಾಬ್ಜ ಮಂಡಲ ಪೂಜೆಯ ಆರಾಧನೆಯ ವಿಶೇಷತೆ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.ಗೋಶಾಲೆಯ ಟ್ರಸ್ಟಿಗಳಾದ ವಿದ್ವಾನ್ ಪದ್ಮನಾಭ ಆಚಾರ್ಯ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.



































