
ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ನಂತರ ರಾಜ್ಯದ ಗೃಹ ಇಲಾಖೆ ತೀವ್ರ ಚಟುವಟಿಕೆಯಲ್ಲಿ ತೊಡಗಿದ್ದು, ಕೋಮು ಸೌಹಾರ್ಧತೆಯನ್ನು ಕಾಪಾಡುವ ನಿಟ್ಟಿನಲ್ಲಿ ಮಂಗಳೂರು ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ 56 ಪೊಲೀಸ್ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ.
ಬಜ್ಜೆ ಠಾಣೆ ಹೆಡ್ ಕಾನ್ಸ್ಟೇಬಲ್ ರಶೀದ್ ವರ್ಗಾವಣೆ:
ಈ ಪೈಕಿ ಬಜ್ಜೆ ಠಾಣೆಯ ಹೆಡ್ ಕಾನ್ಸ್ಟೇಬಲ್ ರಶೀದ್ ಅವರನ್ನು ಮಂಗಳೂರು ಮಹಿಳಾ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಸುಹಾಸ್ ಶೆಟ್ಟಿಯ ಹಂತಕರಿಗೆ ಪರೋಕ್ಷವಾಗಿ ಸಹಾಯ ಮಾಡಿದ್ದಾರೆ ಎಂಬ ಆರೋಪ ಬಿಜೆಪಿ ನಾಯಕರಿಂದ ಕೇಳಿಬಂದಿತ್ತು.
ಗೃಹ ಇಲಾಖೆಯ ತ್ವರಿತ ಕ್ರಮ:
ಕರಾವಳಿಯಲ್ಲಿ ಕೋಮು ಬಾಂಧವ್ಯ ಕದಡುತ್ತಿರುವ ಸಂದರ್ಭಗಳನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಇಲಾಖೆ, ಈಗಾಗಲೇ ವಿಶೇಷ ಟಾಸ್ಕ್ಫೋರ್ಸ್ ರಚನೆಗೈದು ಕ್ರಮ ಕೈಗೊಂಡಿದೆ. ಇದೀಗ ಪೊಲೀಸ್ ಇಲಾಖೆಯ ತಳಮಟ್ಟದಲ್ಲೂ ಭಾರೀ ಬದಲಾವಣೆ ಆರಂಭವಾಗಿದೆ. ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರಿಂದ ವರ್ಗಾವಣೆ ಆದೇಶ ಹೊರಡಿಸಲಾಗಿದೆ.
ಇನ್ನಷ್ಟು ಸಿಬ್ಬಂದಿಗೆ ವರ್ಗಾವಣೆ ಸಾಧ್ಯತೆ:
ಈ ಹಿಂದೆ ಹಲವು ವರ್ಷಗಳಿಂದ ಒಂದೇ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೂರಾರು ಮಂದಿಗೆ ಮುಂದಿನ ದಿನಗಳಲ್ಲಿ ವರ್ಗಾವಣೆ ನಡೆಯಲಿದೆ ಎಂಬ ಸುಳಿವಿದೆ. ಕೋಮು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕ್ರಮಗಳು ತೀವ್ರಗೊಳ್ಳುತ್ತಿವೆ.