
ಚಿತ್ತೂರು : ಚಿತ್ತೂರು ಜಿಲ್ಲೆಯ ಪುಂಗನೂರಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಶಾಲೆಯ ಶಿಕ್ಷಕಿಯೊಬ್ಬರು ಹೊಡೆದಿದ್ದಕ್ಕೆ ವಿದ್ಯಾರ್ಥಿನಿಯ ತಲೆಬುರುಡೆಯಲ್ಲಿ ಬಿರುಕು ಉಂಟಾಗಿದೆ. ಪುಂಗನೂರಿನ ಹರಿ ಮತ್ತು ವಿಜೇತಾ ದಂಪತಿಯ ಮಗಳು ಸಾತ್ವಿಕಾ ನಾಗಶ್ರೀ (11), ಸ್ಥಳೀಯ ಖಾಸಗಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದಾಳೆ.
ಸೆಪ್ಟೆಂಬರ್ 10 ರಂದು ತರಗತಿಯಲ್ಲಿ ಹಿಂದಿ ಶಿಕ್ಷಕಿಯೊಬ್ಬರು ತರಗತಿಯಲ್ಲಿ ಸರಿಯಾಗಿ ವರ್ತಿಸಲಿಲ್ಲ ಎಂಬ ಕಾರಣಕ್ಕೆ ಆಕೆಯ ತಲೆಗೆ ಸ್ಕೂಲ್ ಬ್ಯಾಗ್ ನಿಂದ ಹೊಡೆದಿದ್ದಾರೆ. ಸಾತ್ವಿಕಾಳ ತಾಯಿ ಅದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರೂ, ಆರಂಭದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ.
ಹೊಡೆತದಿಂದ ತಲೆನೋವು ಹೆಚ್ಚಾಗಿದ್ದರಿಂದ ನಾಗಶ್ರೀ ಮೂರು ದಿನಗಳ ಕಾಲ ಶಾಲೆಗೆ ಹೋಗಲಿಲ್ಲ. ಪೋಷಕರು ಪುಂಗನೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಾಗ, ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯುವಂತೆ ಸೂಚಿಸಿದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ, ಆಕೆಯ ತಲೆಬುರುಡೆಯಲ್ಲಿ ಗಂಭೀರವಾದ ಬಿರುಕು ಉಂಟಾಗಿರುವುದು ಕಂಡುಬಂದಿದೆ. ಇದು ವಿದ್ಯಾರ್ಥಿನಿಯ ಆರೋಗ್ಯಕ್ಕೆ ಅಪಾಯಕಾರಿ ಎಂದು ವೈದ್ಯರು ತಿಳಿಸಿದ್ದಾರೆ.
ಈ ಘಟನೆಯ ನಂತರ, ಸಾತ್ವಿಕಾ ನಾಗಶ್ರೀಯ ತಾಯಿ ಮತ್ತು ಸಂಬಂಧಿಕರು ಸೋಮವಾರ ರಾತ್ರಿ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆ ಪೋಷಕರು ಮತ್ತು ಸಾರ್ವಜನಿಕರಲ್ಲಿ ಆಕ್ರೋಶವನ್ನು ಮೂಡಿಸಿದೆ.



































