
ಕಾರ್ಕಳ : ಕುಕ್ಕುಂದೂರು ಗ್ರಾಮದ ಜೋಡುರಸ್ತೆಯ ಶ್ರೀ ಗಣೇಶ ಮಂಟಪದಲ್ಲಿ ಐದು ದಿನಗಳ ಕಾಲ ನಡೆದ 42ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾರಂಭದ ಸಮಾರೋಪ ಸಮಾರಂಭ ಕಾರ್ಯಕ್ರಮ ಮತ್ತು ಗಣಪತಿ ವಿಗ್ರಹದ ವಿಸರ್ಜನಾ ಮೆರವಣಿಗೆಯು ಅತ್ಯಂತ ವಿಜೃಂಭಣೆಯಿಂದ ದಿನಾಂಕ 31-8-2025 ರಂದು ನಡೆಯಿತು.
ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಕೆ. ಎಮ್. ಇ. ಎಸ್ ಸಂಸ್ತೆಯ ಪ್ರಿನ್ಸಿಪಾಲ್ ಮತ್ತು ಸಾಹಿತಿಯಾಗಿರುವ ಕೆ. ಬಾಲಕೃಷ್ಣ ರಾವ್ ರವರು ತಮ್ಮ ಅಧ್ಯಕ್ಷ ಭಾಷಣದಲ್ಲಿ “ಲೋಕಮಾನ್ಯ ಭಾಲಗಂಗಾಧರ ತಿಲಕ್ ರವರು ಆರಂಭಿಸಿದ ಗಣೇಶೋತ್ಸವ ಇಂದು ಲೋಕಾವ್ಯಾಪಿಯಾಗಿದೆ. ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಲು ಆರಂಭಿಸಿದ ಗಣೇಶೋತ್ಸವ ಮೊದಲು ಮುಂಬೈ ಹತ್ತಿರದ ಪುಣೆಯಲ್ಲಿ ನಡೆಯಿತು. ಗಣೇಶೋತ್ಸವದಿಂದ ಸಂಘಟನೆ ಮತ್ತು ಸಾಮರಸ್ಯ ಸಾಧ್ಯ”ಎಂದು ಹೇಳಿದರು .
“ಕಾರ್ಕಳದ ಜೋಡುರಸ್ತೆಯಲ್ಲಿ ಆರಂಭಿಸಿದ ಗಣೇಶೋತ್ಸವಕ್ಕೆ ಈಗ 42 ವರ್ಷ, ಆದರೆ ಈ ವರ್ಷದ ವಿಶೇಷವೇನಂದರೆ ಗಣೇಶ ದೇವರಿಗೆ ಬೆಳ್ಳಿಯ ಪ್ರಭಾವಳಿಯ ಸಮರ್ಪಣೆ. ಐದು ದಿನಗಳ ವರೆಗೆ ನಡೆದ ಗಣೇಶೋತ್ಸವದಲ್ಲಿ ದಿನವೂ ತ್ರಿಕಾಲ ಪೂಜೆ, ಭಜನೆಕುಣಿತ, ಯಕ್ಷಗಾನ ತಾಳಮದ್ದಳೆ, ಸಾಕ್ಸೋ ಫೋನ್ ವಾದನ, ಪ್ರತಿಭಾ ಪುರಸ್ಕಾರ, ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ ಕ್ರೀಡಾ ಪಟುಗಳಿಗೆ ಬಹುಮಾನ ವಿತರಣೆ, ರೋಗಿಗಳಿಗೆ ಧನಸಹಾಯ, ದಾನಿಗಳಿಗೆ ಸನ್ಮಾನ, ಅಧಿಕ ಅಂಕಗಳನ್ನು ಪಡೆದ ಕುಕ್ಕುಂದೂರು ಗ್ರಾಮದ ಮೂರು ಶಾಲೆಯ ವಿದ್ಯಾರ್ಥಿಗಳಿಗೆ ಸನ್ಮಾನ, ಈ ರೀತಿ ಹತ್ತು ಹಲವು ರಂಗಗಳಲ್ಲಿ ಸಾಧನೆ ಮಾಡಿದ ಗ್ರಾಮಸ್ತರಿಗೆ ಸನ್ಮಾನ, ಇವುಗಳೆಲ್ಲವೂ ಪ್ರಶಂಶನೀಯ. ದೇವರಿಗೆ ಅರ್ಪಿತವಾದ 25 ಲಕ್ಷ ರೂಪಾಯಿ ಬೆಲೆ ಬಾಳುವ ಬೆಳ್ಳಿಯ ಪ್ರಭಾವಳಿ ಸಮರ್ಪಣೆಗೆ ಕಾರಣೀಕರ್ತರಾದ, ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಸಂತೋಷ್ ರಾವ್ ಅಭಿನಂದನಾರ್ಹರು. ” ಎಂದು ಅವರು ಹೇಳಿದರು.
ಸೌ. ಅಶ್ವಿನಿ ನಾಯಕ್ ರವರು ಮಾತನಾಡಿ “ಭಾರತದಲ್ಲಿ ಸನಾತನ ಧರ್ಮ ಉಳಿದರೆ ದೇಶ ಉಳಿಯುವುದು. ಇಂದು ಗಣೇಶನನ್ನು ಪ್ರತಿಯೊಬ್ಬರು ಪೂಜಿಸುತ್ತಾರೆ. ಗಣೇಶನ ವಿಗ್ರಹದ ಪ್ರತಿಯೊಂದು ಅಂಗಾಗಗಳಿಗೂ ವಿಶೇಷ ಅರ್ಥ ಇದೆ ” ಎಂದರು.
ಮತ್ತೋರ್ವ ಮುಖ್ಯ ಅತಿಥಿ ಶಾಂತಾ. ಪಿ. ಸಾಲಿಯಾನ್ ಮಾತನಾಡಿ “42 ವರುಷಗಳಿಂದ ನಿರಂತರವಾಗಿ ಇದೇ ಸ್ಥಳದಲ್ಲಿ ಗಣೇಶೋತ್ಸವ ಆಚರಣೆಯನ್ನು ಮಾಡುವುದು ಪ್ರಶಂಸನೀಯ. ಎಲ್ಲರಿಗೂ ಆ ದೇವರ ಅನುಗ್ರಹ ನಿರಂತರವಾಗಿ ಇರಲಿ ” ಎಂದು ಹಾರೈಸಿದರು.
ಮತ್ತೋರ್ವ ಮುಖ್ಯ ಅತಿಥಿ ದೀಪಾ. ಕೆ. ವಿಶ್ವನಾಥ್ ಮಾತನಾಡಿ ” ನನ್ನನ್ನು ಬೆಂಗಳೂರಿನಿಂದ ಇಲ್ಲಿವರೆಗೆ ಕರೆಯಿಸಿ ಸಮಾರಂಭದಲ್ಲಿ ಭಾಗವಹಿಸುವಂತೆ ಮಾಡಿದ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಸಂತೋಷ್ ರಾವ್ ಅವರಿಗೆ ಧನ್ಯವಾದಗಳು ” ಎಂದು ಹೇಳಿದರು.
ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಸಂತೋಷ್ ರಾವ್ ರವರು ಸ್ವಾಗತಿಸಿದರು. ರವಿ ಶೆಟ್ಟಿಯವರು ಬಹುಮಾನ ಪಡೆದವರ ಪಟ್ಟಿಯನ್ನು ಓದಿದರು. ಪ್ರಧಾನ ಕಾರ್ಯದರ್ಶಿ ಪ್ರಸಾದ್ ಐಸಿರ ಕಾರ್ಯಕ್ರಮದ ನಿರೂಪಣೆ ಮಾಡಿದರು.ಕೋಶಾಧಿಕಾರಿಯಾದ ಕಿಶೋರ್ ಕುಮಾರ್ ಧನ್ಯವಾದ ಸಮರ್ಪಣೆ ಮಾಡಿದರು.
ದೇವರಿಗೆ ಮಹಾಪೂಜೆ ನಡೆದ ಬಳಿಕ ಬಂಡಿಮಠದ ವರೆಗೆ ಅದ್ದೂರಿಯ ಭವ್ಯ ಮೆರವಣಿಗೆ ನಡೆಯಿತು. ನಂತರ ಜೋಗಿನಕೆರೆಯಲ್ಲಿ ಗಣಪತಿ ವಿಗ್ರಹದ ವಿಸರ್ಜನೆ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಮೆರವಣಿಗೆಯಲ್ಲಿ ಭಾಗವಹಿಸಿದರು.