
ಗದಗ : ಜಿಲ್ಲೆಯ ಹರ್ತಿ ಗ್ರಾಮದ ಸಮೀಪ ಗುರುವಾರ (ಮಾ. 5) ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ನಿಯಂತ್ರಣ ತಪ್ಪಿದ ಗೂಡ್ಸ್ ವಾಹನವೊಂದು ರಸ್ತೆ ಬದಿಯ ಮರಕ್ಕೆ ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಮೃತರನ್ನು ಗದಗ ತಾಲ್ಲೂಕಿನ ಹಿರೇಕೊಪ್ಪ ಗ್ರಾಮದ ಮುತ್ತಪ್ಪ ಸುಟಗೇರಿ (35) ಮತ್ತು ನಿಂಗಪ್ಪ ಯಳವತ್ತಿ (36) ಎಂದು ಗುರುತಿಸಲಾಗಿದೆ. ಗಾಯಗೊಂಡ ಎಂಟು ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಿರೇಕೊಪ್ಪ ಗ್ರಾಮದ ಸುಮಾರು 10 ಮಂದಿ ಗೋಜನೂರಿನಲ್ಲಿ ನಡೆದ ಕಾಮಣ್ಣನ ಮೆರವಣಿಗೆಯನ್ನು ವೀಕ್ಷಿಸಲು ತೆರಳಿದ್ದರು. ಮೆರವಣಿಗೆ ಮುಗಿಸಿ ಮರಳಿ ತಮ್ಮ ಗ್ರಾಮಕ್ಕೆ ಗೂಡ್ಸ್ ವಾಹನದಲ್ಲಿ ಬರುತ್ತಿದ್ದಾಗ ಚಾಲಕನ ಅಜಾಗರೂಕತೆಯಿಂದಾಗಿ ವಾಹನವು ಮರಕ್ಕೆ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ ವಾಹನವು ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



































