
ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣ ಚಿಕಿತ್ಸೆಯ ಕೊರತೆಯಿಂದ ಉಂಟಾಗುವ ಸಾವುಗಳನ್ನು ತಡೆಗಟ್ಟುವ ಉದ್ದೇಶದಿಂದ, ಕೇಂದ್ರ ಸರಕಾರ ಮಹತ್ವದ ಆರೋಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ಅಪಘಾತದ ದಿನದಿಂದ ಆರಂಭಿಸಿ ಏಳು ದಿನಗಳವರೆಗೆ ₹1.5 ಲಕ್ಷ ಮಿತಿಯಲ್ಲಿ ನಗದುರಹಿತ ಚಿಕಿತ್ಸೆ ಲಭ್ಯವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಂಗಳವಾರ ಪ್ರಕಟಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.
ದೇಶದ ಯಾವುದೇ ರಸ್ತೆಯಲ್ಲಿ, ಯಾವುದೇ ರೀತಿಯ ವಾಹನದಿಂದ ಸಂಭವಿಸುವ ಅಪಘಾತಕ್ಕೂ ಈ ಯೋಜನೆ ಅನ್ವಯವಾಗಲಿದೆ. ಅಪಘಾತಕ್ಕೀಡಾದವರು ತಕ್ಷಣವೇ ಹತ್ತಿರದ ಆಯ್ದ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗೆ ಹೋಗಿ ಮುಂಗಡ ಹಣ ಪಾವತಿಸದೇ ತುರ್ತು ಚಿಕಿತ್ಸೆಯನ್ನು ಪಡೆಯಬಹುದು. ದಾಖಲಾಗುವಾಗ ಯಾವುದೇ ದಾಖಲಾತಿ ನೀಡುವ ಅಗತ್ಯವಿಲ್ಲ. ಗಾಯಗೊಂಡಿರುವ ವಾಹನ ಸವಾರರು, ಪ್ರಯಾಣಿಕರು ಅಥವಾ ಪಾದಚಾರಿಗಳು ಎಲ್ಲರೂ ಯೋಜನೆಯ ಲಾಭ ಪಡೆಯಬಹುದಾಗಿದೆ.
ಈ ಯೋಜನೆಯಡಿ ತುರ್ತು ಚಿಕಿತ್ಸೆಗೆ ಅಗತ್ಯವಿರುವ ಔಷಧ, ಶಸ್ತ್ರಚಿಕಿತ್ಸೆ, ಐಸಿಯು ಸೌಲಭ್ಯಗಳು ಎಲ್ಲವೂ ಒಳಗೊಂಡಿವೆ. ಪ್ರತಿ ಪ್ರಕರಣಕ್ಕೆ ಸಂಬಂಧಿಸಿದ ವೈದ್ಯಕೀಯ ದಾಖಲೆಗಳು, ಎಫ್ಐಆರ್ ಪ್ರತಿಗಳು ಇಟ್ಟುಕೊಂಡರೆ ಹೆಚ್ಚಿನ ಲಾಭ ಪಡೆಯಲು ಸಾಧ್ಯ ಎಂದು ಸಚಿವಾಲಯ ತಿಳಿಸಿದೆ.
ಈ ಯೋಜನೆಯ ಜವಾಬ್ದಾರಿಯನ್ನು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (NHA) ಹೊತ್ತಿದ್ದು, ಪೊಲೀಸರ, ಆಸ್ಪತ್ರೆಗಳ ಹಾಗೂ ರಾಜ್ಯ ಆರೋಗ್ಯ ಸಂಸ್ಥೆಗಳ ಸಹಯೋಗದಿಂದ ಹಣವನ್ನು ನೇರವಾಗಿ ಆಸ್ಪತ್ರೆಗಳಿಗೆ ಪಾವತಿಸಲಾಗುವುದು. ಈ ಯೋಜನೆಯ ಸುಗಮ ಜಾರಿಗಾಗಿ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸುವುದಾಗಿ ಹೇಳಿದೆ. 2024ರ ನವೆಂಬರ್ನಲ್ಲೇ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು.