
ಉಡುಪಿ: ಕುಂದಾಪುರದ ಹಿರಿಯ ರಾಜಕಾರಣಿ, ಮಾಜಿ ಶಾಸಕ ಮತ್ತು ಧಾರ್ಮಿಕ ಮುಖಂಡರಾದ ಶ್ರೀ ಅಪ್ಪಣ್ಣ ಹೆಗ್ಡೆಯವರ ನಿಧನಕ್ಕೆ ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಐದೂ ಪರ್ಯಾಯಗಳನ್ನು ಕಂಡ ಅಪರೂಪದ ವ್ಯಕ್ತಿ ಅಪ್ಪಣ್ಣ ಹೆಗ್ಡೆಯವರು ಎಂದು ಸ್ಮರಿಸಿದ ಶ್ರೀಗಳು, ಅವರ ಅಗಲಿಕೆಯು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದಾರೆ.
ಸರಳ ಸಜ್ಜನಿಕೆಯ ಧೀಮಂತ ನಾಯಕ
ಅಪ್ಪಣ್ಣ ಹೆಗ್ಡೆಯವರು ತಮ್ಮ ಸರಳತೆ, ಸೌಜನ್ಯ ಮತ್ತು ನಿರಾಡಂಬರ ವ್ಯಕ್ತಿತ್ವದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಮೌಲ್ಯಾಧಾರಿತ ರಾಜಕಾರಣದ ಪ್ರತಿನಿಧಿಯಾಗಿದ್ದ ಅವರು, ನೂರಾರು ಸಾಮಾಜಿಕ ಕಾರ್ಯಗಳಿಗೆ ಮಾರ್ಗದರ್ಶಕರಾಗಿದ್ದರು. ಧರ್ಮದರ್ಶಿಯಾಗಿ ಹಲವಾರು ಧರ್ಮಕಾರ್ಯಗಳನ್ನು ಮುನ್ನಡೆಸಿದ ಹೆಗ್ಗಳಿಕೆ ಇವರದ್ದಾಗಿತ್ತು.
ಶ್ರೀಮಠದೊಂದಿಗೆ ಅವಿನಾಭಾವ ಸಂಬಂಧ
ಪೇಜಾವರ ಶ್ರೀಗಳೊಂದಿಗೆ ಅಪ್ಪಣ್ಣ ಹೆಗ್ಡೆಯವರಿಗೆ ವಿಶೇಷ ಒಡನಾಟವಿತ್ತು. ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಮ್ಮ ಐದನೇ ಪರ್ಯಾಯೋತ್ಸವದ ಸಂದರ್ಭದಲ್ಲಿ ಇವರನ್ನು ‘ದರ್ಬಾರ್ ಸಂಮಾನ’ ನೀಡಿ ಗೌರವಿಸಿದ್ದರು. ಕುಂದಾಪುರ ಮತ್ತು ಬೈಂದೂರು ಭಾಗದ ಭಕ್ತರನ್ನು ಒಗ್ಗೂಡಿಸಿ ಉಡುಪಿಯ ಪರ್ಯಾಯೋತ್ಸವಗಳಿಗೆ ದೊಡ್ಡ ಮಟ್ಟದ ‘ಹೊರೆಕಾಣಿಕೆ’ ಸಂಗ್ರಹಿಸಿ ತರುವಲ್ಲಿ ಅವರ ನೇತೃತ್ವ ಮತ್ತು ಉತ್ಸಾಹ ಮಾದರಿಯಾಗಿತ್ತು ಎಂದು ಶ್ರೀಗಳು ನೆನಪಿಸಿಕೊಂಡಿದ್ದಾರೆ.
“ಅವರಿಗೆ ಸದ್ಗತಿಯನ್ನು ಕರುಣಿಸುವಂತೆ ನಮ್ಮ ಆರಾಧ್ಯಮೂರ್ತಿ ಶ್ರೀ ಕೃಷ್ಣ ಮುಖ್ಯಪ್ರಾಣರಲ್ಲಿ ಪ್ರಾರ್ಥಿಸುತ್ತೇವೆ” ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.



































