
ಬೆಂಗಳೂರು: ರಾಜ್ಯದ ಪುಣ್ಯಕ್ಷೇತ್ರಗಳ ನದಿ, ಸರೋವರ, ಕೆರೆ, ಕಲ್ಯಾಣಿಗಳ 500 ಮೀಟರ್ ವ್ಯಾಪ್ತಿಯಲ್ಲಿ ಸೋಪು, ಶ್ಯಾಂಪೂ ಮಾರಾಟ ಮತ್ತು ಭಕ್ತರು ತಮ್ಮ ವಸ್ತ್ರಗಳನ್ನು ವಿಸರ್ಜಿಸುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಚಿವರು, ನೇತ್ರಾವತಿ ನದಿಯ ಸ್ನಾನಘಟ್ಟದಲ್ಲಿ ಬಿದ್ದಿದ್ದ ಸೋಪು, ಶ್ಯಾಂಪೂ ಪ್ಯಾಕೆಟ್ಗಳು ಹಾಗೂ ಬಟ್ಟೆಗಳನ್ನು ನೋಡಿ ಅಸಮಾಧಾನ ವ್ಯಕ್ತಪಡಿಸಿದರು. ಸಕಲೇಶಪುರದ ಮೂರುಕಣ್ಣು ಗುಡ್ಡದಲ್ಲಿ ರೆಸಾರ್ಟ್ಗಳ ನೀರು ನದಿಗೆ ಸೇರುತ್ತಿರುವ ವಿಚಾರದಲ್ಲಿ ಆತಂಕ ವ್ಯಕ್ತಪಡಿಸಿದರು.
ನದಿ ನೀರಿನ ಗುಣಮಟ್ಟ ತಪಾಸಣೆ
ರೆಸಾರ್ಟ್ಗಳ ಶೌಚಾಲಯದ ನೀರು ನದಿಗೆ ಸೇರುವ ಹಿನ್ನೆಲೆಯಲ್ಲಿ, ಸ್ನಾನಕ್ಕೂ ಯೋಗ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಕುರಿತು ನದಿ ನೀರಿನ ಮಾದರಿಗಳನ್ನು ಪರೀಕ್ಷಿಸಿ ವರದಿ ಸಲ್ಲಿಸಲು ಸಚಿವರು ಮೌಖಿಕ ಆದೇಶ ನೀಡಿದ್ದಾರೆ.