
ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಸೈಂಟ್ ಮೇರಿಸ್ ದ್ವೀಪದ ಬಳಿ ಓಮನ್ ಮೂಲದ ಮೀನುಗಾರಿಕಾ ಬೋಟ್ ಪತ್ತೆಯಾಗಿದೆ. ಈ ಬೋಟ್ನಲ್ಲಿ ತಮಿಳುನಾಡು ಮೂಲದ ಮೂವರು ಮೀನುಗಾರರು ಸಿಕ್ಕಿದ್ದು, ಅವರು ತಮ್ಮ ಜೀವದ ಭಯದಿಂದ ಓಮನ್ ಹಾರ್ಬಾರ್ನಿಂದ ತಪ್ಪಿಸಿಕೊಂಡು ಬಂದಿದ್ದಾರೆ ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ.
ಈ ಮೀನುಗಾರರು ಓಮನ್ನಲ್ಲಿ ಮೀನುಗಾರಿಕೆಗೆ ಹೋಗಿದ್ದರು. ಆದರೆ ಬೋಟ್ ಮಾಲೀಕರು ಅವರಿಗೆ ವೇತನ ನೀಡದೆ, ಆಹಾರವೂ ಸರಿಯಾಗಿ ಕೊಡದೆ ಚಿತ್ರಹಿಂಸೆ ನೀಡುತ್ತಿದ್ದುದರಿಂದ ಅವರು ದೇಶ ತೊರೆದು ಓಡಿಬಂದಿದ್ದಾರೆ. ಬೋಟ್ ಮಾಲೀಕರು ಅವರ ಪಾಸ್ಪೋರ್ಟ್ ವಶಕ್ಕೆ ಪಡೆದಿದ್ದರಿಂದ ಅವರು ಅಧಿಕೃತವಾಗಿ ಮರಳಲು ಸಾಧ್ಯವಾಗದೆ, ಸಮುದ್ರ ಮಾರ್ಗವಾಗಿ 4,000 ಕಿಲೋಮೀಟರ್ ಪ್ರಯಾಣಿಸಿ ಭಾರತೀಯ ಕರಾವಳಿಗೆ ತಲುಪಿದ್ದಾರೆ.
ಕೋಸ್ಟ್ ಗಾರ್ಡ್ ಮಾಹಿತಿಯಂತೆ, ಈ ಬೋಟ್ ಕಾರವಾರವನ್ನು ದಾಟಿ ಮಲ್ಪೆ ಕಡೆಗೆ ಬರುತ್ತಿತ್ತು. ಆದರೆ ಡೀಸೆಲ್ ಖಾಲಿಯಾಗಿದ್ದು, ಅವರಿಗೆ ಹಣವೂ ಇಲ್ಲದ ಕಾರಣ ಅಲ್ಲಿ ಪರದಾಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರು ತಕ್ಷಣ ಕರಾವಳಿ ಕಾವಲು ಪಡೆಯವರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಬೋಟ್ ಮತ್ತು ಮೀನುಗಾರರನ್ನು ವಶಕ್ಕೆ ಪಡೆಯಲಾಗಿದೆ.
ಪ್ರಸ್ತುತ, ಪಾಸ್ಪೋರ್ಟ್ ಇಲ್ಲದೆ ವಿದೇಶಿ ಬೋಟ್ ಮೂಲಕ ಗಡಿ ದಾಟಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನುಳಿದ ತನಿಖೆ ಮುಂದುವರಿಯುತ್ತಿದೆ.