
ಮಲ್ಪೆಯಲ್ಲಿ ನಡೆದ ಪ್ರಕರಣದ ಹಿನ್ನೆಲೆಯಲ್ಲಿ ಬಂಧಿತರಾಗಿರುವ ಮೀನುಗಾರ ಮಹಿಳೆಯರ ಪರ ನಡೆದ ಸಮಾಲೋಚನಾ ಸಭೆಯಲ್ಲಿ ನ್ಯಾಯಸಮ್ಮತ ತೀರ್ಮಾನಕ್ಕೆ ಆಗ್ರಹಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಫ್ಐಆರ್ ದಾಖಲಿಸಿರುವ ಕ್ರಮವನ್ನು ಹಾಗೂ ರಾಜ್ಯ ವಿಧಾನ ಸಭೆಯಲ್ಲಿ ಶಾಸಕ ಯಶ್ಪಾಲ್ ಸುವರ್ಣ ಸಹಿತ 18 ಶಾಸಕರನ್ನು ಅಮಾನತುಗೊಳಿಸಿರುವ ರಾಜ್ಯ ಕಾಂಗ್ರೆಸ್ ಸರಕಾರದ ಸಂವಿಧಾನ ವಿರೋಧಿ ನಡೆಯನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತೀವ್ರವಾಗಿ ಖಂಡಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗಟ್ಟಿದ್ದು, ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಛೇರಿಯಂತಾಗಿವೆ. ಕಳ್ಳತನ ಅಪಾದಿತರ ಮೇಲೆ ಯಾವುದೇ ಕ್ರಮ ಜರಗಿಸದೆ, ನ್ಯಾಯ ಕೇಳಲು ಬಂದವರ ವಿರುದ್ಧ ಪ್ರಕರಣ ದಾಖಲಿಸಿರುವುದು ತೀರಾ ಹಾಸ್ಯಾಸ್ಪದವೆನಿಸಿದೆ. ಈ ಪ್ರಕರಣ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಳಿ ತಪ್ಪಿರುವುದಕ್ಕೆ ಜ್ವಲಂತ ನಿದರ್ಶನವಾಗಿದೆ.
ಮಾತೆತ್ತಿದರೆ ಸಂವಿಧಾನದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಾ ಸಂವಿಧಾನದ ಪ್ರತಿಯನ್ನು ಕೈಯಲ್ಲೇ ಹಿಡಿದುಕೊಂಡು ತಿರುಗಾಡುತ್ತಾ ಸಂವಿಧಾನವನ್ನು ಅಣಕಿಸುತ್ತಿರುವ ಕಾಂಗ್ರೆಸ್ ನಾಯಕರ ಮುಖವಾಡ ಇಂತಹ ಸಂವಿಧಾನ ವಿರೋಧಿ ನಡೆಯಿಂದ ಕಳಚಿ ಬಿದ್ದಂತಾಗಿದೆ. ರಾಜ್ಯ ಸರಕಾರದ ಆಡಳಿತ ವೈಫಲ್ಯ ಮತ್ತು ಜನ ವಿರೋಧಿ ನೀತಿಯ ವಿರುದ್ಧ ಬಿಜೆಪಿ ಜನಾಂದೋಲನ ಮುಂದುವರಿಯಲಿದೆ.
ಈ ಹಿಂದೆ ವಿಧಾನ ಪರಿಷತ್ ಕಲಾಪದಲ್ಲಿ ಸಭಾಧ್ಯಕ್ಷರನ್ನು ಪೀಠದಿಂದ ಎಳೆದಾಡಿದ್ದ ಕಾಂಗ್ರೆಸ್ ಶಾಸಕರುಗಳ ವರ್ತನೆಯಿಂದ ರಾಜ್ಯದ ಜನತೆಗೆ ಕಾಂಗ್ರೆಸ್ಸಿನ ಗುಂಡಾಗಿರಿ ಸಂಸ್ಕೃತಿಯ ದಿವ್ಯ ದರ್ಶನ ಭಾಗ್ಯ ದೊರೆತಿದೆ. ಈ ಪ್ರಕರಣ ಸಭಾಧ್ಯಕ್ಷರ ಪೀಠಕ್ಕೆ ಆಗಿರುವ ಘೋರ ಅವಮಾನ ಎಂಬುದು ಕಾಂಗ್ರೆಸ್ ನಾಯಕರ ಅರಿವಿಗೆ ಬಾರದೇ ಇರುವುದು ದೊಡ್ಡ ದುರಂತವೇ ಸರಿ. ಹನಿಟ್ರ್ಯಾಪ್ ಪ್ರಕರಣ ಹಾಗೂ ಧರ್ಮಾಧಾರಿತ ಮೀಸಲಾತಿಯನ್ನು ಸದನದಲ್ಲಿ ವಿರೋಧಿಸಿರುವ ಶಾಸಕ ಯಶ್ಪಾಲ್ ಸುವರ್ಣ ಸಹಿತ 18 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿರುವ ಸ್ಪೀಕರ್ ನಡೆ ಸಂವಿಧಾನ ವಿರೋಧಿಯಾಗಿದೆ.
ಕೇವಲ ಅಧಿಕಾರದ ದಾಹಕ್ಕಾಗಿ ರಾಜ್ಯವನ್ನು ಸಾಲದ ಶೂಲಕ್ಕೇರಿಸಿ ರಾಜ್ಯದ ಹಿತವನ್ನು ಬಲಿಕೊಡುತ್ತಿರುವ ಕಾಂಗ್ರೆಸ್ ಸರಕಾರದ ಸಂವಿಧಾನ ವಿರೋಧಿ, ಜನ ವಿರೋಧಿ ನೀತಿಯನ್ನು ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಸೂಕ್ತ ಸಮಯದಲ್ಲಿ ಕಾಂಗ್ರೆಸ್ಸಿಗೆ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.