
ಬೀರೂರು: ಹಣದ ವ್ಯಾಮೋಹಕ್ಕೆ ಬಿದ್ದ ಹೆತ್ತ ತಂದೆಯೇ ಸ್ವಂತ ಮಗಳನ್ನು ವೇಶ್ಯಾವಾಟಿಕೆಯ ನರಕಕ್ಕೆ ದೂಡಿದ ಅತ್ಯಂತ ಕಠೋರ ಮತ್ತು ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಸಂಭವಿಸಿದೆ.
ನರಕಕ್ಕೆ ತಳ್ಳಿದ ಹೆತ್ತವರು:
ಬೀರೂರು ಹೋಬಳಿಯ ಗ್ರಾಮವೊಂದರಲ್ಲಿ ಈ ದುರಂತ ನಡೆದಿದ್ದು, ತಾಯಿ ಇಲ್ಲದ 16 ವರ್ಷದ ಅಪ್ರಾಪ್ತ ಬಾಲಕಿಯ ಅಸಹಾಯಕತೆಯನ್ನು ಆಕೆಯ ತಂದೆ ಗಿರೀಶ್ ಹಾಗೂ ಅಜ್ಜಿ ನಾಗರತ್ನ ಬಂಡವಾಳ ಮಾಡಿಕೊಂಡಿದ್ದಾರೆ. ಕೇವಲ ಹಣದ ಆಸೆಗಾಗಿ ಈ ಇಬ್ಬರೂ ಸೇರಿ ಬಾಲಕಿಯನ್ನು ವೇಶ್ಯಾವಾಟಿಕೆ ದಂಧೆಗೆ ಬಳಸಿಕೊಂಡಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ.
ಮಂಗಳೂರಿನಲ್ಲಿ ನಡೆದ ದೌರ್ಜನ್ಯ:
ಆರೋಪಿಗಳು ಭರತ್ ಶೆಟ್ಟಿ ಎಂಬಾತನೊಂದಿಗೆ ಕೈಜೋಡಿಸಿ ಬಾಲಕಿಯನ್ನು ಮಂಗಳೂರಿಗೆ ಕರೆದೊಯ್ದಿದ್ದರು. ಅಲ್ಲಿನ ಲಾಡ್ಜ್ವೊಂದರಲ್ಲಿ ಸುಮಾರು ಆರು ದಿನಗಳ ಕಾಲ ಇರಿಸಲಾಗಿದ್ದು, ಬಾಲಕಿಯ ಮೇಲೆ 10ಕ್ಕೂ ಹೆಚ್ಚು ಕಾಮುಕರಿಂದ ಸತತವಾಗಿ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಅತ್ಯಂತ ಆಘಾತಕಾರಿ ಅಂಶವೆಂದರೆ, ಬಾಲಕಿ ಋತುಸ್ರಾವದ ನೋವಿನಲ್ಲಿದ್ದರೂ ಸಹ ರಕ್ಕಸ ಮನಸ್ಸಿನ ತಂದೆ ಮತ್ತು ಅಜ್ಜಿ ಕಿಂಚಿತ್ತೂ ದಯೆ ತೋರದೆ ಆಕೆಯನ್ನು ದಂಧೆಗೆ ತಳ್ಳಿದ್ದರು.
ಬೀರೂರು ಪೊಲೀಸರಿಂದ ಆರೋಪಿಗಳ ಬಂಧನ:
ಈ ನರಕಯಾತನೆಯಿಂದ ಪಾರಾಗಿ ಊರಿಗೆ ಬಂದ ಬಾಲಕಿ, ತನ್ನ ಚಿಕ್ಕಪ್ಪ ಮತ್ತು ಅತ್ತೆಯ ಬಳಿ ನಡೆದ ಘೋರ ಘಟನೆಯನ್ನು ವಿವರಿಸಿದ್ದಾಳೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸಂಬಂಧಿಕರು ಬೀರೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ಗಂಭೀರತೆ ಅರಿತ ಪೊಲೀಸರು ತಕ್ಷಣ ದಾಳಿ ನಡೆಸಿ ಬಾಲಕಿಯ ತಂದೆ ಗಿರೀಶ್, ಅಜ್ಜಿ ನಾಗರತ್ನ ಮತ್ತು ಸಹಚರ ಭರತ್ ಶೆಟ್ಟಿಯನ್ನು ಕಂಬಿ ಹಿಂದೆ ತಳ್ಳಿದ್ದಾರೆ. ಸದ್ಯ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



































