
ಬೆಂಗಳೂರು: ನಗರದಲ್ಲಿ ನಕಲಿ ‘ನಂದಿನಿ’ ತುಪ್ಪ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಪೊಲೀಸರು ಭೇದಿಸಿದ್ದು, ಈ ಸಂಬಂಧ ಕೆಎಂಎಫ್ ಡಿಸ್ಟ್ರಿಬ್ಯೂಟರ್ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಪೊಲೀಸರು ಕಾರ್ಯಾಚರಣೆ ನಡೆಸಿ ₹1.5 ಕೋಟಿ ರೂ. ಮೌಲ್ಯದ 8,000 ಲೀಟರ್ ನಕಲಿ ತುಪ್ಪವನ್ನು ಸೀಜ್ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ಕೆಎಂಎಫ್ ಡಿಸ್ಟ್ರಿಬ್ಯೂಟರ್ ಮಹೇಂದ್ರ, ಅವರ ಪುತ್ರ ದೀಪಕ್, ಹಾಗೂ ಸಪ್ಲೈರ್ಗಳಾದ ಮುನಿರಾಜು ಮತ್ತು ಅಭಿ ಅರಸು ಎಂದು ಗುರುತಿಸಲಾಗಿದೆ.
ಹೊರ ರಾಜ್ಯದಲ್ಲಿ ತಯಾರಿಕೆ, ಬೆಂಗಳೂರಿನಲ್ಲಿ ಸರಬರಾಜು
ಬಂಧಿತ ಆರೋಪಿಗಳು ಸೇರಿಕೊಂಡು ಹೊರ ರಾಜ್ಯದಲ್ಲಿ ಕಲಬೆರಕೆ ತುಪ್ಪವನ್ನು ತಯಾರಿಸಿ, ಅದನ್ನು ಪ್ಯಾಕೆಟ್ ಹಾಗೂ ಪ್ಲ್ಯಾಸ್ಟಿಕ್ ಬಾಟಲ್ಗಳಲ್ಲಿ ತುಂಬಿಸಿ ಬೆಂಗಳೂರಿನಲ್ಲಿದ್ದ ನಂದಿನಿ ಪಾರ್ಲರ್ಗಳಿಗೆ ಸರಬರಾಜು ಮಾಡುತ್ತಿದ್ದರು. ಓರ್ವ ಆರೋಪಿ ತಮಿಳುನಾಡಿನಿಂದ ಕಲಬೆರಕೆ ತುಪ್ಪವನ್ನು ಸಪ್ಲೈ ಮಾಡಿದರೆ, ಇನ್ನೋರ್ವ ಅದನ್ನು ಬೆಂಗಳೂರಿಗೆ ಕಳುಹಿಸುತ್ತಿದ್ದ. ಈ ಜಾಲದಲ್ಲಿ ಕೆಎಂಎಫ್ ಡಿಸ್ಟ್ರಿಬ್ಯೂಟರ್ ಮತ್ತು ಅವರ ಪುತ್ರ ಕೂಡ ಭಾಗಿಯಾಗಿರುವುದು ತಿಳಿದುಬಂದಿದೆ.
ಸದ್ಯ ಪೊಲೀಸರು ಈ ನಾಲ್ವರ ಮುಖವಾಡ ಕಳಚಿ ಬಂಧಿಸಿದ್ದು, ಗ್ರಾಹಕರಿಗೆ ಮೋಸ ಮಾಡುತ್ತಿದ್ದ ದೊಡ್ಡ ಜಾಲವೊಂದನ್ನು ಪತ್ತೆ ಹಚ್ಚಿದ್ದಾರೆ.




































