
ಕಾರ್ಕಳ : ಶಾಲಾ ಶಿಕ್ಷಣ ಇಲಾಖೆ ( ಪದವಿ ಪೂರ್ವ ) ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಅರ್ಥಶಾಸ್ತ್ರ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ವೇದಿಕೆ ಹಾಗೂ ಕ್ರಿಯೇಟಿವ್ ಪದವಿಪೂರ್ವ ಕಾಲೇಜು, ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ಅರ್ಥಶಾಸ್ತ್ರ ವಿಷಯದ ಪುನಶ್ಚೇತನ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ 28 ಜುಲೈ 2025 ರಂದು ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಜರುಗಿತು.
ಕಾರ್ಯಗಾರದ ಉದ್ಘಾಟನೆಯನ್ನು ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ನ ಪರವಾಗಿ ಕಾರ್ಕಳದ ಉದ್ಯಮಿ ಸೂರಜ್ ಶೆಟ್ಟಿ ನೆರವೇರಿಸಿ ಉದ್ಘಾಟನಾ ಮಾತುಗಳನ್ನಾಡುತ್ತ ” ಮನೆ ಬಜೆಟ್ ನಿಂದ ಹಿಡಿದು ರಾಷ್ಟ್ರದ ಬಜೆಟ್ ತನಕ ಎಲ್ಲದರ ಹಿಂದೆ ಅರ್ಥಶಾಸ್ತ್ರದ ತತ್ವಗಳು ಕಾರ್ಯನಿರ್ವಹಿಸುತ್ತವೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡಲು ವಿಶ್ಲೇಷಣಾ ಕೌಶಲ್ಯ, ಆರ್ಥಿಕ ತರ್ಕ ಮತ್ತು ನಿರ್ಣಾಯಕತೆ ಅಗತ್ಯ ” ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲಾ ಶಿಕ್ಷಣ ಇಲಾಖೆ ( ಪದವಿ ಪೂರ್ವ ) ಉಡುಪಿ ಜಿಲ್ಲೆಯ ಉಪನಿರ್ದೇಶಕರಾದ ಶ್ರೀ ಮಾರುತಿಯವರು ” ಅರ್ಥಶಾಸ್ತ್ರ ಮತ್ತು ಆರ್ಥಿಕತೆ ಎಂದರೆ ಕೇವಲ ಹಣದ ಚಲಾವಣೆ ಅಲ್ಲ, ಅದು ನಮ್ಮ ಆಯ್ಕೆಗಳು, ಆದ್ಯತೆಗಳು ಮತ್ತು ಜೀವನ ಪಾಠಗಳ ಚಿಹ್ನೆಯಾಗಿದೆ ” ಎಂದು ಹೇಳುತ್ತಾ ಜಾಗತಿಕ ಆರ್ಥಿಕತೆಯ ಪ್ರವಾಹದಲ್ಲಿ ಹೇಗೆ ಸಮತೋಲನ ವಹಿಸಬೇಕು ಎಂದು ತಿಳಿಸಿದರು.
ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕರೂ ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ರವರು ಅರ್ಥಶಾಸ್ತ್ರದ ಮಹತ್ವ, ಅದರ ಪ್ರಾಯೋಗಿಕ ಬಳಕೆ ಹಾಗೂ ಅರ್ಥಶಾಸ್ತ್ರವನ್ನು ವೃತ್ತಿಯಾಗಿ ಹೇಗೆ ಆಚರಿಸಬಹುದು ಎಂಬುದರ ಕುರಿತು ಮಾತುಗಳನ್ನಾಡಿದರು.
ಕಾರ್ಯಗಾರದಲ್ಲಿ 2025 ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ 100 ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಅಲ್ಲದೆ 2025 ನೇ ಸಾಲಿನಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಶೇ. 100 ಫಲಿತಾಂಶ ಸಾಧಿಸಿದ ಕಾಲೇಜುಗಳ ಉಪನ್ಯಾಸಕರನ್ನು ಪುರಸ್ಕರಿಸಿ ಗೌರವಿಸಲಾಯಿತು. 2025 ರಲ್ಲಿ ಅರ್ಥಶಾಸ್ತ್ರ ವಿಷಯದಿಂದ ಪ್ರಾಂಶುಪಾಲರಾಗಿ ಮುಂಬಡ್ತಿ ಹೊಂದಿದ ಶ್ರೀ ವಿನ್ಸೆಂಟ್ ವಿನೋದ್ ಡಿಸೋಜಾ, ಪ್ರಾಂಶುಪಾಲರು, ಸರ್ಕಾರಿ ಪದವಿಪೂರ್ವ ಕಾಲೇಜು, ಬೆಳ್ಮಣ್ಣು ಇವರನ್ನು ಅಭಿನಂದಿಸಲಾಯಿತು.

2025 ನೇ ಸಾಲಿನಲ್ಲಿ ವಯೋನಿವೃತ್ತಿ ಹೊಂದುತ್ತಿರುವ ಶ್ರೀ ಗೋಪಾಲ್ ಭಟ್, ಪ್ರಾಂಶುಪಾಲರು, ಸರ್ಕಾರಿ ಪದವಿಪೂರ್ವ ಕಾಲೇಜು ಹೊಸಂಗಡಿ ಮತ್ತು ಶ್ರೀ ನಾಗರಾಜ್ ವೈದ್ಯ, ಪ್ರಾಂಶುಪಾಲರು, ಸರ್ಕಾರಿ ಪದವಿ ಪೂರ್ವ ಕಾಲೇಜು, ಗೋಳಿಯಂಗಡಿ ಇವರನ್ನು ಸನ್ಮಾನಿಸಲಾಯಿತು.