
ಉಡುಪಿ: ಪೂಜೆ, ಭಕ್ತಿ ಪ್ರದರ್ಶನದ ವಸ್ತುಗಳಲ್ಲ, ಬದಲಾಗಿ ನಮ್ಮೆಲ್ಲರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮಾರ್ಗಗಳು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಉಡುಪಿಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಮಠಾಧೀಶರಾದ ಶ್ರೀ ಸುಗಣೇಂದ್ರ ತೀರ್ಥ ಶ್ರೀಪಾದರ 64ನೇ ಜನ್ಮನಕ್ಷತ್ರೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
“ಕೆಲವರು ನನ್ನನ್ನು ಬಂಡೆ ಎಂದು ಕರೆಯುತ್ತಾರೆ. ಬಂಡೆ ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ನೀವು ಬಂಡೆಯಿಂದ ಮೆಟ್ಟಿಲು, ಆಧಾರ ಸ್ತಂಭ, ಜಲ್ಲಿ, ವಿಗ್ರಹ ಮಾಡಬಹುದು. ಅದೇ ರೀತಿ ನೀವು ನನ್ನನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು” ಎಂದು ಅವರು ಹೇಳಿದರು.
ಕೃಷ್ಣನ ಭಕ್ತಿ ಮತ್ತು ಡಿ.ವಿ.ಜಿ. ಕಗ್ಗ:
ತಮ್ಮ ಭಾಷಣದುದ್ದಕ್ಕೂ ಕೃಷ್ಣನ ತತ್ವಗಳು ಮತ್ತು ತತ್ವಜ್ಞಾನಿ ಡಿ.ವಿ.ಜಿ ಅವರ ವಿಚಾರಗಳನ್ನು ಉಲ್ಲೇಖಿಸಿದ ಅವರು, ಧರ್ಮ, ಪೂಜೆ ಮತ್ತು ಭಕ್ತಿ ಕೇವಲ ಪ್ರದರ್ಶನದ ವಸ್ತುಗಳಾಗಿರಬಾರದು. ಅವು ಮಾನವನ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮಾರ್ಗಗಳಾಗಿವೆ ಎಂದು ಒತ್ತಿ ಹೇಳಿದರು. ಶ್ರೀ ಪುತ್ತಿಗೆ ಶ್ರೀಗಳ ಜೊತೆ ಮಧ್ವಾಚಾರ್ಯರ ಅಂಚೆಚೀಟಿ ಬಿಡುಗಡೆ ಮಾಡಿದ್ದು ತಮ್ಮ ಭಾಗ್ಯವೆಂದು ಸಂತಸ ವ್ಯಕ್ತಪಡಿಸಿದರು. ರಾಜಕಾರಣಿ, ಪ್ರೇಮಿ, ಶಿಕ್ಷಕ ಮತ್ತು ತಂತ್ರಜ್ಞನಾದ ಶ್ರೀಕೃಷ್ಣನ ವ್ಯಕ್ತಿತ್ವವನ್ನು ಹೊಗಳಿದರು. “ನಾಮ ಹಲವು, ದೈವವೊಂದೇ” ಎಂಬ ತತ್ವದಂತೆ ಎಲ್ಲ ಧರ್ಮಗಳ ಮೂಲವೂ ಒಂದೇ ಎಂದು ಅವರು ಪ್ರತಿಪಾದಿಸಿದರು.
ಯಶಸ್ಸಿನ ದಾರಿಗೆ ಮಹಾಭಾರತದ ಪಾಠ:
ಯಶಸ್ಸನ್ನು ಸಾಧಿಸಲು ಮಹಾಭಾರತದ ಪಾತ್ರಗಳಿಂದ ನಾವು ಕಲಿಯಬೇಕಾದ ಗುಣಗಳನ್ನು ಶಿವಕುಮಾರ್ ಪಟ್ಟಿ ಮಾಡಿದರು. “ಧರ್ಮರಾಯನ ಧರ್ಮತ್ವ, ಕರ್ಣನ ದಾನತ್ವ, ಅರ್ಜುನನ ಗುರಿ, ಭೀಮನ ಬಲ, ವಿದುರನ ನೀತಿ ಮತ್ತು ಕೃಷ್ಣನ ತಂತ್ರಗಳು ಯಶಸ್ಸಿಗೆ ಅತ್ಯಗತ್ಯ” ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಸಂಸದ ಶ್ರೀನಿವಾಸ ಪೂಜಾರಿ ಅವರ ಹೆಸರನ್ನು ಉಲ್ಲೇಖಿಸಿ ಮಾತುಗಳನ್ನು ಮುಂದುವರಿಸಿದರು.
ಭಾರತೀಯ ಸಂಸ್ಕೃತಿಯ ಅನನ್ಯತೆ:
ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯಗಳನ್ನು ವಿವರಿಸುತ್ತಾ, ಅಲೆಕ್ಸಾಂಡರ್ ಮತ್ತು ಅವನ ಗುರು ಅರಿಸ್ಟಾಟಲ್ನ ಕಥೆಯನ್ನು ನೆನಪಿಸಿಕೊಂಡರು. ಅಲೆಕ್ಸಾಂಡರ್ಗೆ ಭಾರತದಿಂದ ರಾಮಾಯಣ, ಭಗವದ್ಗೀತೆ, ಗಂಗಾ ಜಲ, ಕೃಷ್ಣನ ಕೊಳಲು ಮತ್ತು ಒಬ್ಬ ತತ್ವಜ್ಞಾನಿಯನ್ನು ತರುವಂತೆ ಅರಿಸ್ಟಾಟಲ್ ಹೇಳಿದ್ದನಂತೆ. ಈ ಐದು ಅಂಶಗಳು ಭಾರತೀಯ ಸಂಸ್ಕೃತಿಯ ಮಹತ್ವವನ್ನು ಸಾರುತ್ತವೆ ಎಂದು ಶಿವಕುಮಾರ್ ತಿಳಿಸಿದರು. ಕೃಷ್ಣನ ಕೊಳಲು, ಡೋಲು ಮತ್ತು ಚೆಂಡೆಯ ಉದಾಹರಣೆಗಳನ್ನು ನೀಡಿ, ಪ್ರಕೃತಿಯಲ್ಲಿ ಅಡಗಿರುವ ಅರಿವಿನ ಬಗ್ಗೆ ವಿಸ್ಮಯ ವ್ಯಕ್ತಪಡಿಸಿದರು.
ಪೂಜೆ ಮತ್ತು ಪ್ರಾರ್ಥನೆಯ ಶಕ್ತಿ:
“ಪ್ರಯತ್ನಗಳು ವಿಫಲವಾದರೂ, ಪ್ರಾರ್ಥನೆ ಎಂದಿಗೂ ವಿಫಲವಾಗುವುದಿಲ್ಲ” ಎಂದು ನುಡಿದ ಅವರು, ಕಷ್ಟ-ಸುಖಗಳನ್ನು ಭಗವಂತನೊಂದಿಗೆ ಹಂಚಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗಬಹುದು ಎಂದು ಹೇಳಿದರು. ಡಿ.ವಿ.ಜಿ. ಅವರ ‘ಕಗ್ಗ’ವನ್ನು ಉಲ್ಲೇಖಿಸಿ, ಪ್ರತಿ ಮನುಷ್ಯನಿಗೂ ಸಾಧನೆ ಮಾಡುವ ಸಾಮರ್ಥ್ಯ ಮತ್ತು ಒಂದಲ್ಲಾ ಒಂದು ಅವಕಾಶ ದೊರೆಯುತ್ತದೆ ಎಂದು ವಿವರಿಸಿದರು.
“ಸಮಯ, ಮಾತು, ನಂಬಿಕೆ ಮತ್ತು ಅವಕಾಶಗಳು ಒಮ್ಮೆ ಕೈತಪ್ಪಿದರೆ ಮರಳಿ ಬರುವುದಿಲ್ಲ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ” ಎಂದು ಅವರು ನುಡಿದರು. ಕೊನೆಯಲ್ಲಿ, ಶ್ರೀ ಪುತ್ತಿಗೆ ಶ್ರೀಗಳ ಆಶೀರ್ವಾದ ಪಡೆದಿದ್ದು ತಮ್ಮ ಭಾಗ್ಯ ಎಂದು ಹೇಳಿ, ಶುಭಂ ಕರೋತಿ ಕಲ್ಯಾಣಂ… ಶ್ಲೋಕದೊಂದಿಗೆ ತಮ್ಮ ಭಾಷಣವನ್ನು ಮುಗಿಸಿದರು.